ಆಳಂದ: ತಾಲ್ಲೂಕಿನ ನಿರಗುಡಿ ಗ್ರಾಮದ ಸಿದ್ಧೇಶ್ವರ ದೇವರ ಆರಂಭಗೊಂಡ ಐದು ದಿನಗಳ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಪಲ್ಲಕ್ಕಿ ಹಾಗೂ ಪಂಜಾಗಳ ಮೆರವಣಿಗೆ ಜರುಗಿತು.
ಬೆಳಗಿನ ಜಾವ ಗ್ರಾಮದ ಹೊರವಲಯದಲ್ಲಿನ ಸಿದ್ಧೇಶ್ವರ ದೇವಸ್ಥಾನದಿಂದ ಮುಖ್ಯ ಬೀದಿಯ ಮೂಲಕ ದೇಶಮುಖರವರ ಮನೆಯವರೆಗೆ ಪಲ್ಲಕ್ಕಿ, ಪಂಜಾದ ಉತ್ಸವ ಸಾಗಿತು. ಜನರು ಪಲ್ಲಕ್ಕಿ ಹಾಗೂ ಪಂಜಾ ದೇವರುಗಳಿಗೆ ನೀರು ಹಾಕಿ, ನೈವೇದ್ಯ, ತೆಂಗಿನ ಕಾಯಿ ಕರ್ಪ್ಯೂರ ಬೆಳಗಿ ದರ್ಶನ ಪಡೆದರು.
ದೀವಟಗಿ, ನಂದಿಕೋಲು, ಭಜನೆ ವಾದ್ಯ ವೈಭವದ ಮೂಲಕ ಪಲ್ಲಕ್ಕಿ ಮತ್ತು ಪಂಜಾವನ್ನು ಬರಮಾಡಿಕೊಂಡರು.
ಬಳಿಕ ಗ್ರಾಮದಲ್ಲಿ ಗೀಗೀ ಪದಗಳು ಜರುಗಿದವು. ಮಧ್ಯಾಹ್ನ ಜಂಗಿ ಪೈಲ್ವಾನರ ಕುಸ್ತಿ, ಸಂಜೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಹಾಗೂ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು.
ಉತ್ಸವದಲ್ಲಿ ಗ್ರಾ.ಪಂ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಮತ್ತು ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡು ಜಾತ್ರೆ ಯಶಸ್ಸಿಗೆ ಶ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.