ಕಲಬುರಗಿ: ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಜಿಲ್ಲಾಧ್ಯಕ್ಷ ಹಣಮಂತರಾಯ ಎಸ್. ಅಟ್ಟೂರ ನೇತೃತ್ವದಲ್ಲಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
‘ಭಾರತೀಯ ಸೇನೆಯು ಉದ್ಯೋಗ ನೀಡುವ ದೇಶದ ಎರಡನೇ ದೊಡ್ಡ ಸಂಸ್ಥೆಯಾಗಿದೆ. ಸೈನಿಕ ಹುದ್ದೆಯು ರಾಷ್ಟ್ರ ರಕ್ಷಣೆಯ ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಉದ್ಯೋಗ ಭದ್ರತೆಯನ್ನು ಯುವಕರಿಗೆ ನೀಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತರುವ ಮೂಲಕ ಯುವಕರಿಗೆ ಒದಗುತ್ತಿದ್ದ ಉದ್ಯೋಗ ಭದ್ರತೆಯನ್ನು ನಾಶಗೊಳಿಸಿದೆ. ದೇಶದ ಸುರಕ್ಷತೆಯ ಅಪಾಯಕ್ಕೆ ತಂದು ನಿಲ್ಲಿಸಿದೆ. ಅಗ್ನಿಪಥ ಯೋಜನೆ ಮೊದಲ ಹಂತದ ಯುವಕರು ಈಗಾಗಲೇ ತಮ್ಮ ಸೇವೆ ಪೂರ್ಣಗೊಳಿಸುತ್ತಿದ್ದು ಅವರ ಮುಂದಿನ ಭವಿಷ್ಯವೇನು’ ಎಂದು ಪ್ರಶ್ನಿಸಿದರು.
‘ಸರ್ಕಾರದ ಅಲ್ಪ ಆರ್ಥಿಕ ನೆರವು ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಈ ಯುವಕರು ತಮ್ಮ ಔಪಚಾರಿಕ ಶಿಕ್ಷಣವನ್ನು ಮೊಟಕುಗೊಳಿಸಿ ಈ ಯೋಜನೆಗೆ ಸೇರಿ ಅಲ್ಪಾವಧಿ ಸೇವೆಯನ್ನು ಪೂರ್ಣಗೊಳಿಸಿ ಕಡಿಮೆ ವಯಸ್ಸಿನಲ್ಲಿಯೇ ನಿವೃತ್ತರಾದರೆ ಈ ಕಡೆ ಶಿಕ್ಷಣವೂ ಇಲ್ಲ, ಆ ಕಡೆ ಉದ್ಯೋಗವೂ ಇಲ್ಲ ಎನ್ನುವ ಸ್ಥಿತಿಗೆ ಸಿಲುಕಿಬಿಡುತ್ತಾರೆ. ಯುವಜನರಿಗೆ ಭದ್ರತೆಯ ಉದ್ಯೋಗದ ದೃಷ್ಟಿಯಿಂದ ಅಗ್ನಿಪಥ ಯೋಜನೆಯನ್ನು ಕೈಬಿಡಬೇಕು ಮತ್ತು ಸೇನೆಯಲ್ಲಿ ಈ ಹಿಂದಿನಂತೆ ನೇಮಕಾತಿ ಮಾಡಬೇಕು’ ಅಖಿಲ ಭಾರತ ಯುವಜನ ಫೆಡರೇಷನ್ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಅಸ್ಲಂ ಶೇಖ್, ಆನಂದ ಖೇಳಗಿ, ಮಂಜುನಾಥ ಬಿರಾದಾರ ಖೇಳಗಿ, ಬಸವರಾಜ ಟೆಂಗಳಿ, ಉತ್ತಮಕುಮಾರ ಪಾಂಡುರಂಗ, ತಿಪ್ಪಣ್ಣ ಎಂಪೂರೆ, ಧರೇಶ ಎಂ. ತೇಲಿ, ನಾನಾಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.