ಕಲಬುರಗಿ: ‘ನಮ್ಮ ಸರ್ಕಾರ ಜನಪರವಾದ ಆಡಳಿತ ಕೊಡುತ್ತಿದ್ದು, ₹ 52 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗಾಗಿ ಮೀಸಲಿಟ್ಟಿದ್ದೇವೆ. ಬಡವರಿಗಾಗಿ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡಲು ತೆರಿಗೆ ಹಣ ಬಳಕೆಯಾಗುತ್ತದೆ’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ಇಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನೆರೆಯ ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇನ್ನೂ ಕಡಿಮೆ ಇದೆ. ಒಮ್ಮೆ ಇತಿಹಾಸವನ್ನು ಗಮನಿಸಿ ನೋಡಿ’ ಎಂದರು.
ಕರ್ನಾಟಕಕ್ಕಿಂತ ದೆಹಲಿ, ಜಾರ್ಖಂಡ್ ರಾಜ್ಯದಲ್ಲಿ ಕಡಿಮೆ ದರ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ನಮ್ಮ ಪಕ್ಕದ ರಾಜ್ಯ ಯಾವುದು ಇದೆ ಹೇಳಿ? ಯಾವಾಗಲೂ ಪಕ್ಕದ ರಾಜ್ಯಗಳಲ್ಲಿ ನಮಗಿಂತ ಹೆಚ್ಚಿನ ದರ ಇದೆ. ಅನಿವಾರ್ಯ ಕಾರಣಕ್ಕಾಗಿ ಬಹಳ ಅತ್ಯಲ್ಪ ದರ ಏರಿಕೆ ಮಾಡಿದ್ದೇವೆ. ಬಿಜೆಪಿಯವರು ರಾಜಕೀಯ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರವು ತನ್ನ ಪಾಲಿನ ಸುಂಕ ತಗ್ಗಿಸುವಂತೆ ಒತ್ತಾಯಿಸಿ ಬೀದಿಗೆ ಇಳಿದು ಹೋರಾಟ ಮಾಡಲಿ’ ಎಂದು ತಾಕೀತು ಮಾಡಿದರು.
‘ಬಳ್ಳಾರಿಯ ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆ ಸಂಬಂಧ ಈ ಹಿಂದೆ ಸಲ್ಲಿಕೆಯಾದ ವರದಿಯನ್ನು ತರಿಸಿಕೊಂಡು, ಅಧ್ಯಯನ ಮಾಡಿ ಪ್ರತಿಕ್ರಿಯಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.