ADVERTISEMENT

ವಾಡಿ: ದೂಳು ಹಿಡಿಯುತ್ತಿವೆ ಕಸದ ಡಬ್ಬಿ!

ವರ್ಷ ಕಳೆದರೂ ಇಲ್ಲ ವಿತರಣೆ; ಸ್ವಚ್ಛತೆ ಮರೀಚಿಕೆ

Pavitra Bhat
Published 29 ನವೆಂಬರ್ 2023, 5:01 IST
Last Updated 29 ನವೆಂಬರ್ 2023, 5:01 IST
ವಾಡಿ ಪಟ್ಟಣ ಹೊರವಲಯದ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿಟ್ಟಿರುವ ಡಬ್ಬಿಗಳು
ವಾಡಿ ಪಟ್ಟಣ ಹೊರವಲಯದ ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿಟ್ಟಿರುವ ಡಬ್ಬಿಗಳು   

ವಾಡಿ: ಇಲ್ಲಿನ ಪುರಸಭೆ ಆಡಳಿತವು 14ನೇ ಹಣಕಾಸು ಯೋಜನೆಯಡಿ ಪ್ಲಾಸ್ಟಿಕ್‌ ಕಸದ ಡಬ್ಬಿಗಳನ್ನು ಖರೀದಿ ಮಾಡಿ ವರ್ಷವಾದರೂ ಜನರಿಗೆ ವಿತರಣೆ ಮಾಡದೇ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದೆ.

ಮನೆಗಳಲ್ಲಿ ಸಂಗ್ರಹವಾಗುವ ಹಸಿ ಮತ್ತು ಒಣ ಕಸ ಪ್ರತ್ಯೇಕವಾಗಿಸಲು ಮತ್ತು ಕಸವನ್ನು ಸಂಗ್ರಹಿಸಲು ಅನುಕೂಲ ಆಗುವ ನಿಟ್ಟಿನಲ್ಲಿ ಪ್ರತಿ ಮನೆಗೂ ಕಸದ ಡಬ್ಬಿಗಳನ್ನು ವಿತರಿಸಲು ಸ್ಥಳೀಯ ಪುರಸಭೆ ಕ್ರಮ ಕೈಗೊಂಡಿತ್ತು. ಇದಕ್ಕಾಗಿ 2020-21ನೇ ಹಣಕಾಸು ಯೋಜನೆಯ ಬೇಸಿಕ್‌ ಗ್ರಾಂಟ್‌ನಲ್ಲಿ ಪ್ಲಾಸ್ಟಿಕ್‌ ಡಬ್ಬಿಗಳನ್ನು ಖರೀದಿಸಿತ್ತು. ಆದರೆ, ಇವುಗಳನ್ನು ಜನರಿಗೆ ವಿತರಣೆ ಆಗಿಲ್ಲ.

ಪುರಸಭೆಯು ಡಸ್ಟ್‌ಬಿನ್‌ಗಳನ್ನು ಕೊಡದ ಕಾರಣ ಮನೆಗಳಲ್ಲಿ ಕಸ ಪ್ರತ್ಯೇಕಿಸಲು ಸಾಧ್ಯವಾಗುತ್ತಿಲ್ಲ.  ಪ್ಲಾಸ್ಟಿಕ್ ಕವರ್‌ನಲ್ಲಿ ನಿತ್ಯ ಕಸ ತುಂಬಿಡುತ್ತಿದ್ದೇವೆ. ಹಸಿ ಮತ್ತು ಒಣಕಸವನ್ನು ಒಟ್ಟಿಗೇ ತುಂಬಿ ಕೊಡುತ್ತಿದ್ದೇವೆ. ಕಸ ತೆಗೆದುಕೊಂಡು ಹೋಗಲು ತಡವಾದರೆ ಮನೆಯಲ್ಲೇ ಹಸಿ ಕಸ ಕೊಳೆತು ದುರ್ನಾತ ಬೀರುತ್ತದೆ’ ಎಂದು ಗೃಹಿಣಿಯರು ಸಮಸ್ಯೆ ತೋಡಿಕೊಂಡರು.

ADVERTISEMENT

ಒಣಕಸ ಸಂಗ್ರಹಕ್ಕೆ ಹಸಿರು, ಹಸಿಕಸಕ್ಕೆ ನೀಲಿ ಬಣ್ಣದ ಪ್ಲಾಸ್ಟಿಕ್‌ ಡಬ್ಬಿಗಳನ್ನು ಗುರುತಿಸಿ ಪ್ರತಿ ಮನೆಗೆ 2 ಡಬ್ಬಿಗಳಂತೆ ಮೊದಲ ಹಂತದಲ್ಲಿ ವಿತರಣೆ ಮಾಡುವ ಯೋಜನೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಮಾಡಿ ವಿತರಣೆ ಮಾಡಿದರೆ ಸ್ವಚ್ಛತೆಯತ್ತ ದಿಟ್ಟ ಹೆಜ್ಜೆ ಇಟ್ಟಂತಾಗುತ್ತದೆ. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಸದ ಬುಟ್ಟಿಗಳು ಜನರ ಉಪಯೋಗಕ್ಕೆ ಬಾರದೆ  ಕಸ ವಿಲೇವಾರಿ ಘಟಕದಲ್ಲಿ ದೂಳು ಹಿಡಿದಿವೆ.

ಕಸ ಪ್ರತ್ಯೇಕಿಸುವ ಸವಾಲು:  ‘ಮನೆ–ಮನೆಗಳಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳಲ್ಲಿ ಸ್ವಚ್ಛತೆ ಜಾಗೃತಿಯ ಹಾಡುಗಳನ್ನು ನಿತ್ಯ ಪ್ರಸಾರ ಮಾಡಲಾಗುತ್ತದೆ. ಘನತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ಕೊಡುವುದರಿಂದ ಕಸದ ವಿಲೇವಾರಿ ಸುಲಭವಾಗುತ್ತದೆ. ಆದರೆ ಡಬ್ಬಿಗಳ ಕೊರತೆಯಿಂದ ಬಹುತೇಕ ಮನೆಯವರು ಹಸಿ ಮತ್ತು ಒಣ ಕಸವನ್ನು ಒಟ್ಟಿಗೆ ಕೊಡುವುದರಿಂದ ಅದನ್ನು ವಿಲೇವಾರಿ ಮಾಡಲು ಪೌರಕಾರ್ಮಿಕರು ಪರದಾಡುತ್ತಿದ್ದಾರೆ. ಕೂಡಲೇ ಕಸದ ಡಬ್ಬಿಗಳನ್ನು ಸಾರ್ವಜನಿಕರಿಗೆ ವಿತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಯಂಕಮ್ಮ ಗೌಡಗಾಂವ

ಡಬ್ಬಿಗಳು ಇಲ್ಲದ ಕಾರಣ ಪ್ಲಾಸ್ಟಿಕ್ ಚೀಲಗಳಲ್ಲಿ ಒಣ ಹಾಗೂ ಹಸಿಕಸ ಒಟ್ಟಿಗೆ ತುಂಬಿ ಇಡುತ್ತಿದ್ದು ಸಮಸ್ಯೆ ಉಂಟಾಗುತ್ತಿದೆ. ಸಾರ್ವಜನಿಕ ವಿತರಣೆಗೆ ಬಂದಿರುವ ಡಬ್ಬಿಗಳನ್ನು ಕೂಡಲೇ ವಿತರಿಸಬೇಕು

–ಯಂಕಮ್ಮ ಗೌಡಗಾಂವ, 14ನೇ ವಾರ್ಡ್‌ ನಿವಾಸಿ

ಕಾರಣಾಂತರಗಳಿಂದ ಕಸದ ಡಬ್ಬಿಗಳನ್ನು ವಿತರಿಸಲು ಸಾಧ್ಯವಾಗಿರಲಿಲ್ಲ. ಎರಡ್ಮೂರು ದಿನಗಳಲ್ಲಿ ಫಲಾನುಭವಿಗಳ ಪಟ್ಟಿ ಮಾಡಿ ಪ್ರತಿ ವಾರ್ಡ್‌ನಲ್ಲಿ ವಿತರಣೆ ಮಾಡಲಾಗುವುದು

–ಲತಾಮಣಿ ಹಿರಿಯ ಆರೋಗ್ಯ ನಿರೀಕ್ಷಕಿ ವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.