ಕಲಬುರಗಿ: ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಬೈಲಾವನ್ನು ತಿದ್ದುಪಡಿ ಮಾಡುವ ಮೂಲಕ ಹಟಗಾರ ಸಮಾಜ ಸೇರ್ಪಡೆ ಮಾಡುವ ಸಂಬಂಧ ರಾಜ್ಯ ಅಧ್ಯಕ್ಷರೊಂದಿಗೆ ಮಾತನಾಡಿ ಒತ್ತಡ ಹಾಕುವುದಾಗಿ ಕರ್ನಾಟಕ ನೇಕಾರ ಸಮುದಾಯಗಳ ಒಕ್ಕೂಟದ ಕಲಬುರಗಿ ಜಿಲ್ಲಾಧ್ಯಕ್ಷ ಪ್ರದೀಪ ಸಂಗಾ ಭರವಸೆ ನೀಡಿದರು.
ನಗರದಲ್ಲಿ ಇತ್ತೀಚೆಗೆ ಹಟಗಾರ ಸಮಾಜ ಅಭಿವೃದ್ಧಿ ಸಂಘ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯ ಸಂಘದ ಸಾಮಾನ್ಯ ಸಭೆಯಲ್ಲಿ ಹಟಗಾರ ಸಮಾಜ ಸೇರ್ಪಡೆ ಬಗ್ಗೆ ಮಾತನಾಡುವೆ ಎಂದು ಅವರು ತಿಳಿಸಿದರು.
ಇಲ್ಲಿಯವೆರೆಗೆ ರಾಜ್ಯ ಸಂಘದ ಸಾಮಾನ್ಯ ಸಭೆ ಆಗಿಲ್ಲ. ಬರುವ ದಿನಗಳಲ್ಲಿ ಹಟಗಾರ ಸಮಾಜ ಸೇರ್ಪಡೆ ಮಾಡಿಯೇ ತೀರುತ್ತೇನೆ. ಆಗದಿದ್ದ ಪಕ್ಷದಲ್ಲಿ ರಾಜೀನಾಮೆಗೂ ಸಿದ್ಧ. ಈ ಬಗ್ಗೆ ಯಾವ ಸಂದೇಹ ಬೇಡ. ರಾಜ್ಯದಲ್ಲಿ ನೇಕಾರ ಬಾಂಧವರು ಕನಿಷ್ಠ 70 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಹಟಗಾರ ಬಾಂಧವರು ಹೆಚ್ಚಿದ್ದಾರೆ. ಈಗಾಗಲೇ ರಾಜ್ಯ ಸಂಘದ ಅಧ್ಯಕ್ಷ ಬಿ.ಎಸ್.ಸೋಮಶೇಖರ ಅವರಿಗೆ ಸೇರ್ಪಡೆ ಕುರಿತು ಮನದಟ್ಟು ಆಗಿದೆ. ಬೈಲಾ ತಿದ್ದುಪಡಿಗಾಗಿ ಸಾಮಾನ್ಯ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎನ್ನುವ ಭರವಸೆ ಮೂಡಿಸಿದ್ದನ್ನು ಸಂಗಾ ಸ್ಮರಿಸಿದರು.
ಜಿಲ್ಲಾ ಉಪಾಧ್ಯಕ್ಷ ಮಲ್ಲಿನಾಥ ನಿಂಬಾಳ ಮಾತನಾಡಿ, ‘ನೇಕಾರ ನೇತಾರರು ಬಲಗೊಳ್ಳಬೇಕು ಎನ್ನುವ ಸದಿಚ್ಛೆ ಇದ್ದರೂ, ನಮ್ಮಲ್ಲಿರುವ ಸಂಘಟನಾತ್ಮಕ ಶಕ್ತಿ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಹೆಚ್ಚು ನೇಕಾರರ ಸಂಖ್ಯೆಯನ್ನು ಹೊಂದಿರುವ ಆಳಂದನಲ್ಲಿ ನೇಕಾರ ನೇತಾರರು ಚುನಾವಣೆಗೆ ಸ್ಪರ್ಧಿಸುವ ಕಾಲ ಬರಬೇಕು‘ ಎಂದರು.
ಹಿರಿಯ ಉಪಾಧ್ಯಕ್ಷ ನಾರಾಯಣರಾವ ಸಿಂಘಾಡೆ, ಗೌರವಾಧ್ಯಕ್ಷ ಶಿವಪುತ್ರಪ್ಪ ಭಾವಿ, ಅಧ್ಯಕ್ಷ ಚನಮಲ್ಲಪ್ಪ ನಿಂಬೇಣಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಶಾಂತಕುಮಾರ ಯಳಸಂಗಿ, ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ, ಸಹ ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ಖಜಾಂಚಿ ಶ್ರೀನಿವಾಸ ಬಲಪುರ, ಯುವ ಅಧ್ಯಕ್ಷ ಲಕ್ಷ್ಮೀಕಾಂತ ಜೋಳದ, ಉಪಾಧ್ಯಕ್ಷ ರವಿಕುಮಾರ ಯಳಸಂಗಿ, ರೇವಣಸಿದ್ಧಪ್ಪ ಗಡ್ಡದ, ಕಾನೂನು ಸಲಹೆಗಾರ ಶಿವಲಿಂಗಪ್ಪ ಅಷ್ಟಗಿ, ಗುರುನಾಥ ಸೊನ್ನದ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾವ್ ಬಹಾದ್ದೂರ ರೂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮನಾಥ ರೇವತಗಾಂವ ನಿರೂಪಿಸಿದರು. ಸತೀಶ ಜಮಖಂಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.