ADVERTISEMENT

ಕಲಬುರಗಿ: ಹವಾ ಮಲ್ಲಿನಾಥ ಮುತ್ಯಾಗೆ 13 ದಿನ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 4:14 IST
Last Updated 20 ಫೆಬ್ರುವರಿ 2024, 4:14 IST
ಹವಾ ಮಲ್ಲಿನಾಥ
ಹವಾ ಮಲ್ಲಿನಾಥ   

ಕಲಬುರಗಿ: ಮಹಿಳೆಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಜೈ ಭಾರತ ಮಾತಾ ಸೇವಾ ಸಮಿತಿ ಅಧ್ಯಕ್ಷ, ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜ ಮುತ್ಯಾ ಅವರನ್ನು ಎಂಬಿ ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದರು.

2017ರಲ್ಲಿ ದಾಖಲಾದ ಪ್ರಕರಣ ಸಂಬಂಧ ಎರಡನೇ ಹೆಚ್ಚುವರಿ ನ್ಯಾಯಾಲಯವು ಹವಾ ಮಲ್ಲಿನಾಥ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು. ಕೋರ್ಟ್‌ ಮುಂದೆ ಶರಣಾಗಲು ಬಂದಿದ್ದ ಹವಾ ಮಲ್ಲಿನಾಥ ಅವರನ್ನು ಪೊಲೀಸರು ಬಂಧಿಸಿದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ಬಳಿಕ ಮಾರ್ಚ್ 2ರವರೆಗೆ (13 ದಿನ) ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ಪ್ರಕರಣ?: ಹವಾ ಮಲ್ಲಿನಾಥ ಅವರ ಸಂಬಂಧಿ, ಆಳಂದ ತಾಲ್ಲೂಕಿನ ಸರಸಂಬಾದ ಮಲ್ಲಯ್ಯ ಮುತ್ಯಾ ಆಶ್ರಮದ ಪ್ರಕಾಶ ಸ್ವಾಮೀಜಿ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. 3 ವರ್ಷ ಸಂಸಾರ ನಡೆಸಿದ ಬಳಿಕ ಕೆಳ ಜಾತಿಯವಳು ಎಂದು ಪತ್ನಿಗೆ ವಿಚ್ಛೇದನ ನೀಡಿದರು. ಕಲಬುರಗಿಯಲ್ಲಿನ ಮನೆ ಖಾಲಿ ಮಾಡುವಂತೆ ವಿಚ್ಛೇದಿತ ಪತ್ನಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಇದಕ್ಕೆ ಹವಾ ಮಲ್ಲಿನಾಥ ಮುತ್ಯಾ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.