ಆಳಂದ: ಕೇಂದ್ರ ಸಚಿವ ಭಗವಂತ ಖೂಬಾ ಅವರ ಕಾಳಜಿಯಿಂದ ಆಳಂದ ತಾಲ್ಲೂಕಿನಲ್ಲಿ ಎರಡು ದಿನಗಳವರೆಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು, 5000ಕ್ಕೂ ಹೆಚ್ಚಿನ ಜನರು ಆರೋಗ್ಯ ಶಿಬಿರದ ಲಾಭ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ ತಿಳಿಸಿದರು.
ಆರೋಗ್ಯ ಶಿಬಿರದಲ್ಲಿ ಅಭಿನವ ಶ್ರೀ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ಬಸವೇಶ್ವರ ಆಸ್ಪತ್ರೆ ಕಲಬುರಗಿ, ಎಚ್.ಸಿ.ಜಿ. ಆಸ್ಪತ್ರೆ, ನಾರಾಯಣ ನೇತ್ರಾಲಯದಿಂದ ಸುಮಾರು 60 ತಜ್ಞ ವೈದ್ಯರು ಎರಡು ದಿನಗಳವರೆಗೆ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ, ಅವಶ್ಯಕ ಚಿಕಿತ್ಸೆ, ಸಲಹೆ ಹಾಗೂ ಔಷಧ ಮತ್ತು ಶ್ರವಣ ಯಂತ್ರ ಹಾಗೂ ಕನ್ನಡಕಗಳು ನೀಡಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ 1856 ಜನರಿಗೆ ಕನ್ನಡಕಗಳು, 450 ಶ್ರವಣ ಯಂತ್ರಗಳು, ಸುಮಾರು 1500 ಜನರಿಗೆ ಎಕ್ಸರೇ, 450 ಜನರಿಗೆ ಇ.ಸಿ.ಜಿ ಮಾಡಲಾಗಿದೆ. ಜತೆಗೆ ಸಾಕಷ್ಟು ರೋಗಿಗಳಿಗೆ ರಕ್ತಪರೀಕ್ಷೆ ಮೂತ್ರ ಪರಿಕ್ಷೆ, ಬಿ.ಪಿ., ಶುಗರ್ ಮತ್ತು ಸಣ್ಣ ಪುಟ್ಟ ರೋಗಿಗಳಿಗೆ ಅಗತ್ಯ ತಪಾಸಣೆ, ಔಷಧ ಹಾಗೂ ಚಿಕಿತ್ಸೆ ನೀಡಲಾಗಿರುತ್ತದೆ. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ 500ಕ್ಕೂ ಹೆಚ್ಚಿನ ಜನರಿಗೆ ಆಯುಷ್ಮಾನ್ ಭಾರತ ಕಾರ್ಡ ಮಾಡಿಕೊಡಲಾಗಿದೆ ಎಂದರು.
ಉದ್ಯಮಿ ಅರುಣಕುಮಾರ ಪಾಟೀಲ ಹಳ್ಳಿಸಲಗರ, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಮಹಾಂತಪ್ಪ ನಿಲೂರು, ಸಿದ್ದುಗೌಡ ಪಾಟೀಲ, ಆನಂದಕುಮಾರ, ಅಣ್ಣಪ್ಪ ಖಾನಾಪುರೆ, ಸಿದ್ಧಾರೂಡ ಸರಸಂಬಿ, ಶರಣಬಸಪ್ಪ ವಾಗ್ದರ್ಗಿ, ವೈದ್ಯರಾದ ಅರುಣ ಮಂಗಾಣೆ, ದಯಾನಂದ ಕಲಶೆಟ್ಟಿ, ಮಹೇಶ ಹಕ್ಕೆ, ಗುರುರಾಜ ದೇಶಪಾಂಡೆ, ಮಲ್ಲಿಕಾರ್ಜುನ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.