ಕಲಬುರಗಿ: ಕೃಷಿ ಇಲಾಖೆಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಜಿಲ್ಲೆಯ ಆರು ರೈತರಿಗೆ ₹2.59 ಕೋಟಿ ಸಹಾಯಧನದಲ್ಲಿ ಕಬ್ಬು ಕಟಾವು ಯಂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ವಿತರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲೆಯ ರೈತರಾದ ಕಾವೇರಿ ಮುತ್ತಪ್ಪ, ನಿಂಗಮ್ಮ ಲಕ್ಷ್ಮಿಕಾಂತ, ಪ್ರಭು ಆಂಜನೇಯ, ಮಹಮ್ಮದ್ ಅಬ್ರೂರ್ ಅಹ್ಮದ್ ಮನ್ಸೂರ್ ಪಟೇಲ್, ವೀರೇಶ ದುಂಡಪ್ಪ ಹಾಗೂ ಶರಣಮ್ಮ ಮಲ್ಲೇಶಪ್ಪ ಅವರಿಗೆ ಕಬ್ಬು ಕಟಾವು ಯಂತ್ರ ಹಸ್ತಾಂತರಿಸಲಾಯಿತು.
ಕಬ್ಬು ಕಟಾವು ಪ್ರತಿ ಯಂತ್ರದ ದರ ₹98.50 ಲಕ್ಷಗಳಷ್ಟಿದೆ. ಕೃಷಿ ಇಲಾಖೆಯ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ರೈತರು ಈ ಯಂತ್ರವನ್ನು ಬ್ಯಾಂಕಿನಿಂದ ಸಾಲ ಪಡೆದು ಯಂತ್ರ ಖರೀದಿಸಬೇಕು. ತದನಂತರ ಕೃಷಿ ಇಲಾಖೆಯಿಂದ ಸಾಮಾನ್ಯ ವರ್ಗದವರಿಗೆ ಗರಿಷ್ಠ ₹40 ಲಕ್ಷ ಮಿತಿಗೊಳಪಟ್ಟು ಶೇ50ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದವರಿಗೆ ಗರಿಷ್ಠ ₹50 ಲಕ್ಷ ಮಿತಿಗೊಳಪಟ್ಟು ಶೇ70ರಷ್ಟು ಸಹಾಯಧನ ಬ್ಯಾಕ್ ಎಂಡ್ ಸಬ್ಸಿಡಿ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಅಫಜಲಪುರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಹರಜ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.