ADVERTISEMENT

21 ದಿನ ಗಣೇಶೋತ್ಸವ | ಲಕ್ಷ ದೀಪೋತ್ಸವ 13ಕ್ಕೆ: ನಾಗೇಂದ್ರ ಕಾಬಡೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 15:42 IST
Last Updated 8 ಸೆಪ್ಟೆಂಬರ್ 2024, 15:42 IST
ನಾಗೇಂದ್ರ ಕಾಬಡೆ
ನಾಗೇಂದ್ರ ಕಾಬಡೆ   

ಕಲಬುರಗಿ: ನಗರದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ 21 ದಿನಗಳ ಕಾಲ ಗಣೇಶ ಉತ್ಸವ ಆಚರಿಸಲಾಗುವುದು. ಉತ್ಸವದ ಅಂಗವಾಗಿ ಲಕ್ಷ ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಉಪನ್ಯಾಸಗಳು ನಡೆಯಲಿವೆ ಎಂದು ಸಮಿತಿಯ ಅಧ್ಯಕ್ಷ ನಾಗೇಂದ್ರ ಕಾಬಡೆ ತಿಳಿಸಿದರು.

ನಗರದಲ್ಲಿ ಭಾನುವಾರ ‍ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಈಗಾಗಲೇ ನಗರದ ಕೋಟೆ ಎದುರು ಗಣಪತಿ ಪ್ರತಿಷ್ಠಾಪಿಸಲಾಗಿದೆ. ಸೆ.27ರಂದು ಬೆಳಿಗ್ಗೆ 10 ಗಂಟೆಗೆ ಬೃಹತ್‌ ಶೋಭಾಯಾತ್ರೆಯೊಂದಿಗೆ ವಿನಾಯಕ ಮೂರ್ತಿಯ ವಿಸರ್ಜನೆ ನಡೆಯಲಿದೆ’ ಎಂದರು.

‘ಈ ನಡುವೆ ಉತ್ಸವದ ಪ್ರಯುಕ್ತ ಸೆ.9ರಂದು ಸಂಜೆ 6ಕ್ಕೆ ಮಾತೆಯರಿಂದ ಮಹಾ ಮಂಗಳಾರತಿ ಜರುಗಲಿದೆ. ನಂತರ ಹಾರಿಕಾ ಮಂಜುನಾಥ ದಿಕ್ಸೂಚಿ ಭಾಷಣ ಮಾಡುವರು. ಸೆ.13ರಂದು ಸಂಜೆ 5.30ಕ್ಕೆ ಲಕ್ಷ ದೀಪೋತ್ಸವ ಜರುಗಲಿದೆ. ಕಾರ್ಗಿಲ್‌ ವಿಜಯೋತ್ಸವಕ್ಕೆ 25ನೇ ವರ್ಷಗಳು ತುಂಬಿದ್ದು, ಹುತಾತ್ಮ ಯೋಧರ ಸ್ಮರಣಾರ್ಥ ಈ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಸೆ.15ರಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ವಿವರಿಸಿದರು.

ADVERTISEMENT

‘ಸೆ.20ರಂದು ಸಂಜೆ 6.30ಕ್ಕೆ ಗಣೇಶ ಮಂಡಳಿ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ, ನಂತರ ಶ್ರೀಕಾಂತ ಶೆಟ್ಟಿ ದಿಕ್ಸೂಚಿ ಭಾಷಣ ಮಾಡುವರು. ಸೆ.22ರಂದು ಸಂಜೆ 7ಕ್ಕೆ ‘ತುರ್ತುಪರಿಸ್ಥಿತಿ’ ಕುರಿತು ಉಪನ್ಯಾಸ ಏರ್ಪಡಿಸಲಾಗಿದ್ದು, ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡುವರು. ಸೆ.24ರಂದು ಸಂಜೆ 6.30ಕ್ಕೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಹೋರಾಟ ಕಥನ ಕುರಿತು ಮಾಧವಿ ಲತಾ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸೆ.26ರಂದು ಬೆಳಗ್ಗೆ 8.15ಕ್ಕೆ ಗಣ ಹೋಮ ಜರುಗಲಿದೆ’ ಎಂದು ವಿವರಿಸಿದರು.

ಹಿಂದೂ ಮಹಾ ಗಣಪತಿ ಸಮಿತಿ ಮುಖಂಡರಾದ ಶರಣು ಪಪ್ಪಾ, ಮಲ್ಲಿಕಾರ್ಜುನ ಗಂಗಾ, ಸುರೇಶ ಟೆಂಗಳಿ, ಸಿದ್ದಾರಾಜ ಬಿರಾದಾರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.