ಕಮಲಾಪುರ: ‘ಸ್ವಧರ್ಮ ಪ್ರತಿಷ್ಟೆ, ಪರಧರ್ಮ ಅಸಹಿಷ್ಣುತೆಯಿಂದ ಪೂರ್ವಾಗ್ರಹ ಪೀಡಿತರಾಗುವುದರಿಂದ ಅಧ್ಯಯನ ದಾರಿತಪ್ಪುವ ಸಾಧ್ಯತೆ ಇದ್ದು, ಇತಿಹಾಸವನ್ನು ಧರ್ಮದಿಂದ ಬೇರ್ಪಡಿಸಿ, ಧರ್ಮನಿರಪೇಕ್ಷವಾಗಿ ಸಂಶೋಧನೆ ಕೈಗೊಳ್ಳಬೇಕಿದೆ’ ಎಂದು ಪತ್ರಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗ ಹಾಗೂ ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ‘ಆಧುನಿಕ ಕರ್ನಾಟಕದ ಚರಿತ್ರೆ ಮತ್ತು ಪತ್ರಾಗಾರ ದಾಖಲೆಗಳು’ ಕುರಿತು ಮಂಗಳವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಇತಿಹಾಸವನ್ನು ಧರ್ಮದಿಂದ ಬೇರ್ಪಡಿಸಿ ನೋಡಿದಾಗ ವಸ್ತುನಿಷ್ಠ ಇತಿಹಾಸ ಗೊತ್ತಾಗುತ್ತದೆ. ನಿಜಾಮರು ಸುಮಾರು 200 ವರ್ಷ ಆಳ್ವಿಕೆ ಮಾಡಿದರು. ಈ ಅವಧಿಯಲ್ಲಿ ಸುಧಾರಿತ ಆಡಳಿತ ವ್ಯವಸ್ಥೆಯ ಜೊತೆಗೆ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕೊನೆಯ 2 ವರ್ಷದಲ್ಲಿ ರಜಾಕರ ಹಾವಳಿಯಿಂದ ಅವರ ನಿಜಾಮನ ಅಭಿವೃದ್ಧಿ ಕಾರ್ಯಗಳು ಮರೆಮಾಚಿದವು. ರಜಾಕರರ ಕೌರ್ಯ ಮುನ್ನೆಲೆಗೆ ಬಂತು. ನಿಜಾಮನನ್ನು ಖಳನಾಯಕನನ್ನಾಗಿ ಬಿಂಬಿಸಲಾಯಿತು. ಧರ್ಮದ ಹೆಸರಿನಲ್ಲಿ ಇತಿಹಾಸ ತಿರುಚಿರುವ ಸಾಧ್ಯತೆ ಇದೆ. ಇಂದಿನ ಸಂಶೋದಕರು ಧಾರ್ಮಿಕ ತಾರತಮ್ಯ ಬದಿಗಿಟ್ಟು, ನಿಖರ ದಾಖಲೆಗಳ ಅಧ್ಯಯನ ನಡೆಸಿ ಸತ್ಯಶೋಧನೆಯ ಮೂಲಕ ವಸ್ತುನಿಷ್ಠ ಇತಿಹಾಸವನ್ನು ಕಟ್ಟಿಕೊಡಬೇಕು’ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಪ್ರಾಧ್ಯಾಪಕ ಡಾ.ಅರ್ಜುನ ಆರ್. ಮಾತನಾಡಿ,‘ವಸಹಾತು ಕಾಲದ ಸಂಶೋಧಕ ಮೆಡೋಸ್ ಟೇಲರ್, ಕರ್ನಲ್ ಮೆಕೆಂಜಿ, ಫ್ರಾನ್ಸಿಸ್ ಬುಕನನ್ ಮತ್ತಿತರ ಸಂಶೋಧಕರು ಕಲ್ಯಾಣ ಕರ್ನಾಟದಕ ಇತಿಹಾಸ ಕುರಿತು ನಡೆಸಿದ ಅಧ್ಯಯನ ಕುರಿತು ಪರಿಚಯಿಸಿದರು.
ಪೂನಾದ ತಿಲಿಕ ಮಹಾರಾಷ್ಟ್ರದ ವಿದ್ಯಾಪೀಠದ ಸಹ ಪ್ರಾಧ್ಯಾಪಕಿ ಡಾ.ನಳಿನಿ ಅವಿನಾಶ ವಾಘ್ಮೋರೆ ಮಾತನಾಡಿ,‘ಕಲ್ಯಾಣ ಕರ್ನಾಟಕದ ಇತಿಹಾಸದ ಕುರಿತು ಹೊರ ರಾಜ್ಯದ ಪತ್ರಗಾರ ಇಲಾಖೆಗಳಲ್ಲಿ ದಾಖಲೆ ದೊರೆಯುತ್ತವೆ. ಬೀದರ, ಕಲಬುರಗಿ ಸೇರಿದಂತೆ ಪೂನಾ, ಮುಂಬೈಗಳಲ್ಲಿ ಮೋಡಿ ಭಾಷೆಯಲ್ಲಿ ಸುಮಾರು 1 ಲಕ್ಷ ದಾಖಲೆಗಳು ಸಿಗುತ್ತವೆ’ ಎಂದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಗೊಳ್ಳೆ ಶಿವಶರಣ ಬಿ, ಪ್ರಾಚಾರ್ಯೆ ಪ್ರೊ. ಅಮೃತಾ ಕಟಕೆ, ಮಹಾಗಾಂವ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಶರಣಪ್ಪ ಎಸ್. ಮಾಳಗೆ, ಪುಂಡಲೀಕರಾವ ಚಿರಡೆ, ಬಸವರಾಜ ಬಾಗಾ, ಅನಂತಾ ಬಿ, ಇಂದುಮತಿ ಪಾಟೀಲ, ಜಗದೇವಪ್ಪ ಟಿ. ಧರಣಿ, ಜ್ಯೋತಿರ್ಮಯಿ ಖಡಕೆ, ಶಾಂತಾ ಅಸ್ಟಿಗೆ, ನೀತಾ ಭೋಸ್ಲೆ, ರಮೇಶ ಪೋತೆ, ರವೀಂದ್ರ ಕುಂಬಾರ, ಮಹಮ್ಮದ ಯುನೂಸ್, ನಿವೇದಿತಾ ಸ್ವಾಮಿ, ಜ್ಯೋತಿ ಕಿರಣಗಿ, ಅವಿನಾಶ ಕಂಟೀಕರ, ಮಹಾಂತೇಶ ಸಾವಳಸೂರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.