ADVERTISEMENT

ಹನಿಟ್ರ್ಯಾಪ್ ಪ್ರಕರಣ: ಹಣಮಂತ ಯಳಸಂಗಿ ಸೇರಿ 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 6:50 IST
Last Updated 10 ಸೆಪ್ಟೆಂಬರ್ 2024, 6:50 IST
ಹಣಮಂತ ಯಳಸಂಗಿ
ಹಣಮಂತ ಯಳಸಂಗಿ   

ಕಲಬುರಗಿ: ಯುವತಿಯರನ್ನು ಬಳಸಿಕೊಂಡು ಉದ್ಯಮಿಗಳಿಗೆ, ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣ ಸಂಬಂಧ ಆರೋಪಿ ಹಣಮಂತ ಯಳಸಂಗಿ ಸೇರಿ ಆರು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಯಳಸಂಗಿ ಸೇರಿದಂತೆ ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ, ಉದಯಕುಮಾರ ಖಣಗೆ, ಅರವಿಂದ ಕಮಲಾಪುರ ಮತ್ತು ಸಂತೋಷ ಪಾಳನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹನಿಟ್ರ್ಯಾಪ್‌ ಆರೋಪದಡಿ ಮಹಾರಾಷ್ಟ್ರ ಮೂಲದ ಸಂತ್ರಸ್ತೆ ಯುವತಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ್ದರು.

ADVERTISEMENT

‘ಪ್ರಭುಲಿಂಗ ಹಿರೇಮಠ ಮತ್ತು ರಾಜು ಲೇಂಗಟಿನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಾಧಾರ, ಸಂತ್ರಸ್ತೆಯರ ಹಾಗೂ ಬಂಧಿತ ಇಬ್ಬರು ಆರೋಪಿಗಳ ಹೇಳಿಕೆಯನ್ನು ಆಧರಿಸಿ ಉಳಿದ ಆರು ಜನರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ವೈದ್ಯಕೀಯ ತಪಾಸಣೆಯ ನಂತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರಿಪಡಿಸುತ್ತೇವೆ. ವಿಚಾರಣೆಗಾಗಿ 10 ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡುವಂತೆ ಕೋರುತ್ತೇವೆ. ಹನಿಟ್ರ್ಯಾಪ್ ಒಳಗಾಗಿದ್ದಾಗಿ ಯಾವುದೇ ಉದ್ಯಮಿಗಳು, ನೌಕರರು ಮುಂದೆ ಬಂದು ದೂರು ಕೊಟ್ಟಿಲ್ಲ. ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದವರು ಮುಂದೆ ಬಂದು ದೂರು ಕೊಟ್ಟರೆ ಅವರ ಗೋಪ್ಯತೆಯನ್ನು ಕಾಪಾಡಿ ವಿಚಾರಣೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಬಿಗಿ ಬಂದೋಬಸ್ತ್‌: ಹಣಮಂತ ಯಳಸಂಗಿ ಅವರು ದಲಿತ ಸೇನೆ ಅಧ್ಯಕ್ಷರಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಎಲ್ಲ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಕರೆದ್ಯೊಯಲಾಯಿತು.

ಪೊಲೀಸ್ ವಾಹನ ಹತ್ತುವ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ಯಳಸಂಗಿ, ‘ಕೆಲ ಕುತಂತ್ರಿಗಳು ದಾಖಲಿಸಿದ್ದ ಸುಳ್ಳು ಪ್ರಕರಣದಲ್ಲಿ ನಾವೇ ಪೊಲೀಸರ ಮುಂದೆ ಶರಣಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಗೆ ಕಳಂಕ ತರಲು ಕೆಲವರು ಯತ್ನಿಸುತ್ತಿದ್ದಾರೆ. ಕಾನೂನಿನ ಮೇಲೆ ಸಂಪೂರ್ಣ ಭರವಸೆ ಇದೆ’ ಎಂದರು. 

ಕಲಬುರಗಿಯಲ್ಲಿ ಸೋಮವಾರ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಆರೋಪಿ ಹಣಮಂತ ಯಳಸಂಗಿ ಸೇರಿ ಆರು ಮಂದಿಯನ್ನು ಪೊಲೀಸರು ಕರೆದೊಯ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.