ಕಲಬುರಗಿ: ನಗರದ ಬೆಂಗಾಲ್ ಸ್ಟೋರ್ಸ್ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹34.25 ಲಕ್ಷ ಸುಲಿಗೆ ಮಾಡಲಾಗಿದ್ದು, ಮಹಾರಾಷ್ಟ್ರ ಮೂಲದ ಯುವತಿ ಸೇರಿ ಒಂಬತ್ತು ಮಂದಿ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಎನ್ನಲಾದ 25 ವರ್ಷದ ಯುವತಿ, ರಾಜು ಲೇಂಗಟಿ, ಪ್ರಭುಲಿಂಗ ಹಿರೇಮಠ, ಉಮೇಶ, ಮಂಜುನಾಥ ಕ್ಯಲಾಣಿ, ಶಹಾಬಾದ್ ಸ್ಟೇಷನ್ ತಾಂಡಾದ ವಿಕ್ರಂ, ಸಾಗರ್ ರಾಠೋಡ್, ಚಂದ್ರಕಾಂತ ಮೇಂಗಜಿ ಮತ್ತು ವಾಡಿಯ ಅಲಿಮ್ ವಿರುದ್ಧ 38 ವರ್ಷದ ವ್ಯಾಪಾರಿ ದೂರು ನೀಡಿದ್ದಾರೆ.
ದೂರುದಾರೆ ಸಂತ್ರಸ್ತೆ ಈಗ ಆರೋಪಿ: ಕೆಲಸ ಕೊಡಿಸುವುದಾಗಿ ಕರೆಯಿಸಿ, ಅತ್ಯಾಚಾರ ಎಸೆಗಿ, ಹನಿಟ್ರ್ಯಾಪ್ಗೆ ತನ್ನನ್ನು ಬಳಸಿಕೊಂಡ ಆರೋಪದಲ್ಲಿ ಮಹಾರಾಷ್ಟ್ರದ ಯುವತಿ ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಸೇರಿ ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ್ದಳು. ಈ ಸಂಬಂಧ ಹಲವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈಗ ಅದೇ ಯುವತಿಯ ವಿರುದ್ಧ ವ್ಯಾಪಾರಿಯೊಬ್ಬರು ದೂರು ಕೊಟ್ಟಿದ್ದಾರೆ.
ಸಿನಿಮೀಯಾ ಶೈಲಿಯಲ್ಲಿ ಟ್ರ್ಯಾಪ್:
ವ್ಯಾಪಾರಿಯು ವ್ಯವಹಾರ ಸಂಬಂಧ ಆಗಾಗ ಹೈದರಾಬಾದ್, ಬೆಂಗಳೂರಿಗೆ ಹೋಗುತ್ತಿದ್ದರು. ವ್ಯಾಪಾರಿಯ ಪರಿಚಯಸ್ಥನಾಗಿದ್ದ ಪ್ರಭು, ಮಹಾರಾಷ್ಟ್ರ ಮೂಲದ ಯುವತಿಗೆ ಆತನ ಫೋನ್ ನಂಬರ್ ಕೊಟ್ಟಿದ್ದರು. ಯುವತಿಯು ವ್ಯಾಪಾರಿ ಜತೆಗೆ ಆಗಾಗ ಫೋನ್ನಲ್ಲಿ ಮಾತನಾಡುತ್ತಿದ್ದರು. ವ್ಯಾಪಾರಿ ಹೈದರಾಬಾದ್ಗೆ ತೆರಳುವ ವಿಚಾರ ತಿಳಿದು, ಇಬ್ಬರೂ ಅಲ್ಲಿಯೇ ಮುಖತಃ ಭೇಟಿಯಾದರು. ಆ ವೇಳೆ ಯುವತಿ, ಪ್ರಭು ಹಿರೇಮಠ ನಿನ್ನ ಫೋನ್ ನಂಬರ್ ಕೊಟ್ಟಿದ್ದಾನೆ, ಏನಾದರು ಕೆಲಸ ಕೊಡಿಸುವಂತೆ ಕೇಳಿಕೊಂಡಳು ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ನ ಲಾಡ್ಜ್ ರೂಂ, ಕಾರಿಡಾರ್ನಲ್ಲಿ ಇಬ್ಬರೂ ಒಟ್ಟಿಗೆ ಇರುವ ಸೆಲ್ಫಿ ತೆಗೆದುಕೊಂಡ ಯುವತಿ, ಭೇಟಿಯ ನೆನಪಿಗಾಗಿ ಎಂದು ನೆಪ ಹೇಳಿದಳು. ವ್ಯಾಪಾರಿಯು ಮರುದಿನ ಮರುದಿನ ಬೆಂಗಳೂರಿಗೆ ಹೋದರು. ಅಲ್ಲಿಯೂ ಯುವತಿ ಭೇಟಿಯಾಗಿ, ಮಾಲ್ ಒಂದರ ಮುಂದೆ ಕುಳಿತ ಸೆಲ್ಫಿ ತೆಗೆದುಕೊಂಡರು. ಆ ಫೋಟೊಗಳನ್ನು ಪ್ರಭು ಹಾಗೂ ರಾಜು ಅವರಿಗೆ ಕಳುಹಿಸಿದ್ದಾಳೆ ಎಂದರು.
ಯುವತಿಯ ಸಂಬಂಧಿಕರು ಎಂದು ಹೇಳಿಕೊಂಡ ವಿಕ್ರಮ್ ಮತ್ತು ಉಮೇಶ, ಬೆಂಗಳೂರಿನಲ್ಲಿ ಯುವತಿ ಜತೆಗೆ ಇದ್ದಾಗ ವ್ಯಾಪಾರಿಯೊಂದಿಗೆ ಜಗಳ ತೆಗೆದರು. ನಮ್ಮ ಮನೆಯ ಹೆಣ್ಣು ಮಗಳೊಂದಿಗೆ ಏಕೆ ಕುಳಿತಿದ್ದಿಯಾ ಎಂದು ಹೆದರಿಸಿ, ಕಾರಿನಲ್ಲಿ ಕೂರಿಸಿಕೊಂಡರು. ಬಳಿಕ ಶಹಾಬಾದ್ ಸಮೀಪ ಕರೆದುಕೊಂಡು ಬಂದರು. ಅಲ್ಲಿಗೆ ರಾಜು, ಪ್ರಭು, ಅಲಿಮ್, ಮಂಜುನಾಥ್ ಬಂದು, ಯುವತಿ ಜತೆಗೆ ಇರುವ ಫೋಟೊಗಳು ಆಕೆಯ ಮನೆಯವರು ನೋಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡರೆ ಅತ್ಯಾಚಾರ ಕೇಸ್ ಹಾಕುತ್ತಾರೆ ಎಂದು ವ್ಯಾಪಾರಿಯನ್ನು ಹೆದರಿಸಿದ್ದರು. ₹1 ಕೋಟಿ ಕೊಟ್ಟರೆ ಇದನ್ನು ಇಲ್ಲಿಯೇ ಮುಚ್ಚಿ ಹಾಕುವುದಾಗಿ ಬೇಡಿಕೆ ಇಟ್ಟಿದ್ದರು. ಕೊನೆಗೆ ₹40 ಲಕ್ಷ ಕೊಡುವಂತೆ ಒಪ್ಪಿಕೊಂಡರು ಎಂದು ಮಾಹಿತಿ ನೀಡಿದ್ದಾರೆ.
ಒಂಬತ್ತು ಜನ ಆರೋಪಿಗಳು ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿ, ಹಲ್ಲೆ ಮಾಡಿ ಬಾಂಡ್ ಪೇಪರ್ ಬರೆಯಿಸಿಕೊಂಡು ಹಂತ– ಹಂತವಾಗಿ ಒಟ್ಟು ₹34.25 ಲಕ್ಷ ಸುಲಿಗೆ ಮಾಡಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ಖೊಟ್ಟಿ ದಾಖಲಿ ಸೃಷ್ಟಿಸಿ
ಲಾರಿಗಳ ಅಕ್ರಮ ನೋಂದಣಿ ಹೊರ ರಾಜ್ಯದ ಲಾರಿಗಳ ಖೊಟ್ಟಿ ದಾಖಲಾತಿಗಳನ್ನು ತಂದು ಕಲಬುರಗಿ ಆರ್ಟಿಒ ಕಚೇರಿಯಲ್ಲಿ ಅಕ್ರಮವಾಗಿ ನೋಂದಣಿ ಮಾಡಿದ ಆರೋಪದಲ್ಲಿ ಫರಹತಾಬಾದ್ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಓಂ ನಗರ ನಿವಾಸಿ ಆರ್ಟಿಒ ಏಜೆಂಟ್ ಶ್ರೀನಾಥ ಶಂಕರ ಮತ್ತು ಆಂಧ್ರಪ್ರದೇಶ ಮೂಲದ ಲಾರಿ ವ್ಯಾಪಾರಿ ಮುರುಳೀಧರ ರೆಡ್ಡಿ ಬಂಧಿತ ಆರೋಪಿಗಳು. ಮುರುಳೀಧರ ಅವರು ಒರಿಸ್ಸಾ ರಾಜ್ಯದಲ್ಲಿ ನೋಂದಾಯಿತವಾದ ಟಿಪ್ಪರ್ ಸೇರಿ 9 ಲಾರಿಗಳ ಖೊಟ್ಟಿ ದಾಖಲಾತಿಗಳನ್ನು ತಂದು ಕಲಬುರಗಿ ಆರ್ಟಿಒ ಏಜೆಂಟ್ ಶ್ರೀನಾಥಗೆ ನೀಡಿದ್ದರು. ಅವುಗಳನ್ನು ಇರಿಸಿಕೊಂಡು ನೈಜ ದಾಖಲೆಗಳು ಎಂಬಂತೆ ತೋರಿಸಿ ಆರ್ಟಿಒದಲ್ಲಿ ನೋಂದಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.