ಕಲಬುರಗಿ: ‘ಎಲ್ಲ ಜೀವಿಗಳ ಒಳಿತು ಬಯಸುವ ಶ್ರೇಷ್ಠ ಪರಂಪರೆ ಹೊಂದಿದ ಭರತ ಭೂಮಿಯಲ್ಲಿ ಜನಿಸಿದ್ದು ನಮ್ಮ ಪುಣ್ಯ’ ಎಂದು ಬಾಳಗಾರು ಮಠದ ಪೀಠಾಧಿಪತಿ ಅಕ್ಷೋಭ್ಯರಾಮಪ್ರಿಯ ತೀರ್ಥರು ಹೇಳಿದರು.
ನಗರದ ಸಂಗಮೇಶ್ವರ ಬಡಾವಣೆಯ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆದ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇಲ್ಲಿ ಎಲ್ಲರನ್ನೂ ಅಣ್ಣ-ತಮ್ಮಂದಿರಂತೆ ಕಾಣಲಾಗುತ್ತದೆ. ಪ್ರಾಚೀನ ವೇದ, ವೈದಿಕ ಶಾಖೆಗಳನ್ನು ಬೆಳೆಸಿದ ಅನೇಕ ಋಷಿಮುನಿಗಳು ನಮ್ಮ ಪರಂಪರೆಯಲ್ಲಿ ಆಗಿ ಹೋಗಿದ್ದಾರೆ. ನಾವು ಸಹ ಇಂಥ ಋಷಿಮುನಿಗಳ ಪರಂಪರೆಗೆ ಸೇರಿದವರು ಎಂದು ಹೇಳಲು ಹೆಮ್ಮೆಯಾಗುತ್ತದೆ’ ಎಂದರು.
‘ಮಾನವರಾದ ನಾವುಗಳು ಕಷ್ಟಗಳನ್ನು ಅನುಭವಿಸಿ ಸಹಿಸಿಕೊಳ್ಳಬೇಕು. ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ದೇಹ ಮತ್ತು ಮನಸ್ಸನ್ನು ಭಗವಂತನ ಸೇವೆಯಲ್ಲಿ ತೊಡಗಿಸಬೇಕು. ಭಗವಂತನು ಋಷಿಗಳ, ಗುರುಗಳ ಹಾಗೂ ತಂದೆ–ತಾಯಿಗಳ ರೂಪದಲ್ಲಿ ಅನುಗ್ರಹಿಸುತ್ತಾನೆ. ರಾಮಾಯಣ, ಮಹಾಭಾರತ ಶ್ರವಣ ಮಾಡಬೇಕು’ ಎಂದು ಸಲಹೆ ನೀಡಿದರು.
ಯಾಜ್ಞವಲ್ಕ್ಯ ಸೇವಾ ಸಮಿತಿಯ ಅಧ್ಯಕ್ಷ ಮಲ್ಹಾರಾವ ಕುಲಕರ್ಣಿ ಗಾರಂಪಳ್ಳಿ, ಹಿರಿಯರಾದ ಚಂದ್ರಕಾಂತ ಗದಾರ್, ಶಾಮಾಚಾರ್ಯ ಬೈಚಬಾಳ್, ಅಶೋಕ್ ಮಳ್ಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಶಾಮಾಚಾರ್ಯ ಜೋಶಿ ವನದುರ್ಗ, ಸುಧೀರ್ ಕುಲಕರ್ಣಿ, ಶ್ರೀರಾಮಾಚಾರ್ಯ ಮಂಜುನಾಥ ಕುಲಕರ್ಣಿ, ಶ್ರೀಧರ ಕುಲಕರ್ಣಿ, ವಿನುತ ಜೋಶಿ, ಮಾರ್ಥಾಂಡ ಹೇಮನೂರ, ವಾಸುದೇವರಾವ ಸಿಂಧಗೇರಿ, ಅಶ್ವಥ್ ಜೋಶಿ, ದತ್ತಾತ್ರೇಯ ಸಬ್ನವಿಸ್, ಅವಧೂತ ಕುಲಕರ್ಣಿ ಹಾಗೂ ಮೈತ್ರಿ ಭಜನಾ ಮಂಡಳಿಯ ಸದಸ್ಯೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.