ADVERTISEMENT

ಯಡ್ರಾಮಿ | ತೊಗರಿಗೆ ಕೀಟ ಬಾಧೆ; ಇಳುವರಿ ಕುಂಠಿತ

ಕೀಟ ನಿಯಂತ್ರಣಕ್ಕೆ ಹರಸಾಹಸ, ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 16:00 IST
Last Updated 22 ಡಿಸೆಂಬರ್ 2023, 16:00 IST
ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮದ ಜಮೀನೊಂದರಲ್ಲಿ ತೊಗರಿಗೆ ಕಂಡು ಬಂದ ಕೀಟಬಾಧೆ
ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮದ ಜಮೀನೊಂದರಲ್ಲಿ ತೊಗರಿಗೆ ಕಂಡು ಬಂದ ಕೀಟಬಾಧೆ   

ಯಡ್ರಾಮಿ: ಮುಂಗಾರು ಮಳೆ ವೈಫಲ್ಯದಿಂದ ತೀವ್ರ ಬರಗಾಲ ಎದುರಾಗಿ ಬೆಳೆಗಳು ಒಣಗಿ ಹೋಗಿವೆ. ಆದರೆ ತೊಗರಿ ಬೆಳೆ ಕೆಲವೆಡೆ ಹಸಿರಾಗಿದ್ದರೂ ಕೀಟಬಾಧೆ ಹೆಚ್ಚಳದಿಂದ ನಿವಾರಣೆಗೆ ರೈತರು ಹರಸಾಹಸ ಪಡುವಂತಾಗಿದೆ.

ತೊಗರಿ ಬೆಳೆ ತನ್ನ ಆಳವಾದ ಬೇರುಗಳಿಂದಾಗಿ ಅಲ್ಲಲ್ಲಿ ಹಸಿರಾಗಿದೆ. ಕಾಲುವೆ ಜಾಲ ಸೇರಿ ನೀರಾವರಿ ಹೊಂದಿದ ಪ್ರದೇಶದಲ್ಲಿ ತೊಗರಿ ಸಮೃದ್ಧವಾಗಿದೆ. ಬರದಿಂದ ಬೆಳೆಹಾನಿಯಾಗಿ ಸಂಕಷ್ಟ ಅನುಭವಿಸಿರುವ ರೈತರಿಗೆ ತೊಗರಿ ಸ್ವಲ್ಪ ಕೈ ಹಿಡಿಯುವ ಭರವಸೆ ಮೂಡಿಸುತ್ತಿದೆ.

ಅಲ್ಲಲ್ಲಿ ಸಮೃದ್ಧವಾಗಿ ಹಸಿರಿನಿಂದ ಕಂಗೊಳಿಸುತ್ತಿರುವ ತೊಗರಿ ಬೆಳೆಗೆ ಕೀಟಬಾಧೆ ಹೆಚ್ಚಳವಾಗಿದ್ದು, ರೈತರು ಕೀಟಗಳ ನಿವಾರಣೆಗೆ ಕಷ್ಟ ಪಡುತ್ತಿದ್ದಾರೆ. ನಿರಂತರವಾಗಿ ಕೀಟನಾಶಕ ಸಿಂಪಡಣೆ ಮಾಡುವುದರಲ್ಲಿ ಕಾಲ ಕಳೆಯುವಂತಾಗಿದೆ. ವಾರದಲ್ಲಿ ಎರಡು ಸಲ ಕೀಟನಾಶಕ ಸಿಂಪಡಣೆ ಮಾಡುವುದು ಅನಿವಾರ್ಯವಾಗಿದೆ ಎಂದು ರೈತರು ಅಳಲು ತೊಡಿಕೊಂಡರು.

ADVERTISEMENT

ಮಳೆ ಇಲ್ಲದೆ ಇಳುವರಿ ಕುಂಠಿತ: ಮುಂಗಾರುಮಳೆ ಕೈ ಕೊಟ್ಟಿದ್ದರಿಂದ ಸಕಾಲಕ್ಕೆ ತೊಗರಿ ಬಿತ್ತನೆಯಾಗಲಿಲ್ಲ. ತಡವಾಗಿ ಬಿತ್ತನೆ ಮಾಡಿದ್ದು ಇಳುವರಿ ಕುಂಠಿತಗೊಳ್ಳತ್ತದೆ. ಜತೆಗೆ ಕೀಟಬಾಧೆಯಿಂದಾಗಿ ಇಳುವರಿ ಮತ್ತಷ್ಟೂ ಕುಸಿತಗೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ.

ರಾಜಶೇಖರ ಅಮರಗೋಳ ಬಿರಾಳ ಹಿಸ್ಸಾ ರೈತ

ಕಾಯಿಕೊರಕ ಕೀಟ ತೊಗರಿಗೆ ಸಾಮಾನ್ಯವಾಗಿ ಕಂಡು ಬರುತ್ತದೆ. ತೊಗರಿ ಬೆಳೆಗೆ ಕೀಟಬಾಧೆ ಉಂಟಾದರೆ 0.4 ಎಂಎಲ್ ಇಮಾಮೆಕ್ಟಿನ್ ಬೆಂಜೋಯೆಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಣೆ ಮಾಡಬೇಕು. ಮುಂಜಾಗೃತಾ ಕ್ರಮವಾಗಿ ತೊಗರಿ ಹೂವು ಬಿಡುವ ಸಮಯದಲ್ಲಿ, ಕೀಟ ತತ್ತಿ ಇಡುವ ಸಮಯದಲ್ಲಿ ಪ್ರೋಪೆನೊಪಾಸ್ ಕೀಟನಾಶಕ ಸಿಂಪಡಣೆ ಮಾಡಿದರೆ ಕೀಟಬಾಧೆ ಸಮರ್ಪಕವಾಗಿ ನಿಯಂತ್ರಣ ಮಾಡಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಈರಣ್ಣ ಭಜಂತ್ರಿ ಅಧ್ಯಕ್ಷರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಬರಗಾಲದಿಂದ ಶೇ 99ರಷ್ಟು ತೊಗರಿ ಬೆಳೆ ಹಾನಿಯಾಗಿದೆ. ಸರ್ಕಾರ ತೊಗರಿ ಕನಿಷ್ಠ ₹15 ಸಾವಿರ ಬೆಂಬಲ ಬೆಲೆ ನಿಗದಿಪಡಿಸಬೇಕು
ಈರಣ್ಣ ಭಜಂತ್ರಿ ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ರೈತ ಸಂಪರ್ಕ ಕೇಂದ್ರದಲ್ಲಿ ಕೀಟನಾಶಕ ಲಭ್ಯವಿದ್ದು ರೈತರು ಬಳಸಿಕೊಳ್ಳಬಹುದು ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ
ಅಬ್ದುಲ್ ಮಜೀದ್ ಸಹಾಯಕ ಕೃಷಿ ನಿರ್ದೇಶಕ ಜೇವರ್ಗಿ
ತೊಗರಿ ಕೆಲವು ಕಡೆ ಕಟಾವಿಗೆ ಬಂದರೆ ಇನ್ನೂ ಕೆಲ ಕಡೆ ಕಟಾವಿಗೆ ಬಂದಿಲ್ಲ. ಇದರ ನಡುವೆ ಕೀಟ ಬಾಧೆ ಹೆಚ್ಚಾಗಿದೆ. ಸರ್ಕಾರ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು
- ರಾಜಶೇಖರ ಅಮರಗೋಳ ಬಿರಾಳ ಹಿಸ್ಸಾ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.