ADVERTISEMENT

ಕಾಳಗಿ | ಅಂಬೇಡ್ಕರ್ ಪುತ್ಥಳಿಗೆ ಅವಮಾನ: ರಾಜ್ಯಹೆದ್ದಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 14:28 IST
Last Updated 23 ಜನವರಿ 2024, 14:28 IST
ಕಾಳಗಿ ಪಟ್ಟಣದಲ್ಲಿ ಮಂಗಳವಾರ ವಿವಿಧ ದಲಿತ ಸಂಘಟನೆಗಳು ರಾಜ್ಯಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ತಹಶೀಲ್ದಾರ್ ಘಮಾವತಿ ರಾಠೋಡ್ ಅವರಿಗೆ ಮನವಿ ಸಲ್ಲಿಸಿದರು
ಕಾಳಗಿ ಪಟ್ಟಣದಲ್ಲಿ ಮಂಗಳವಾರ ವಿವಿಧ ದಲಿತ ಸಂಘಟನೆಗಳು ರಾಜ್ಯಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ತಹಶೀಲ್ದಾರ್ ಘಮಾವತಿ ರಾಠೋಡ್ ಅವರಿಗೆ ಮನವಿ ಸಲ್ಲಿಸಿದರು   

ಕಾಳಗಿ: ಕಲಬುರಗಿಯ ಕೋಟನೂರ (ಡಿ) ಗ್ರಾಮದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ರಾಜ್ಯಹೆದ್ದಾರಿ ತಡೆದು ಪ್ರತಿಭಟಿಸಿದರು.

ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸಂಘಟಕರು, ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ್ದು ಯಾರು ಸಹಿಸುವಂತಿಲ್ಲ. ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಆಸ್ತಿ ಮುಟ್ಟುಗೋಲು ಹಾಕಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಒತ್ತಾಯಿಸಿದರು.

ಈ ಪ್ರತಿಭಟನೆಯಿಂದಾಗಿ ಒಂದು ತಾಸಿನವರೆಗೂ ಕಲಬುರಗಿ-ಚಿಂಚೋಳಿ, ಕಾಳಗಿ-ಸುಗೂರ ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು. ತಹಶೀಲ್ದಾರ್ ಘಮಾವತಿ ರಾಠೋಡ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು.

ADVERTISEMENT

ಮುಖಂಡರಾದ ಕಲ್ಯಾಣರಾವ ಡೊಣ್ಣೂರ, ಶಂಕರ ಹೇರೂರ, ಬಾಬುರಾವ ಶೆಳ್ಳಗಿ, ಶಾಮರಾವ ಸಜ್ಜನ, ಮಹೇಂದ್ರ ಕೊಳ್ಳಿ, ಸುಗೂರ, ಖತಲಪ್ಪ ಅಂಕನ, ಕಾಶಿನಾಥ ದೇಗಲ್ಮಡಿ, ರೇವಣಸಿದ್ದಪ್ಪ ಕಟ್ಟಿಮನಿ, ನಾಗರಾಜ ಬೇವಿನಕರ್, ಸಂತೋಷ ಮಾಳಗಿ, ದಿನೇಶ ಮೊಘ, ಅವಿನಾಶ ಕೊಡದೂರ, ಗುರುನಂದೇಶ ಕೋಣಿನ, ಭರತ ಬುಳ್ಳಾ, ಕೃಷ್ಣ ಕಟ್ಟಿಮನಿ, ಭೀಮರಾವ ತದಲಾಪುರ, ಜೈಭೀಮ ಶೆಳ್ಳಗಿ, ಲಕ್ಷ್ಮಣ ಮಾರನ, ಬಾಬು ಡೊಣ್ಣೂರ, ಸಂತೋಷ ನರನಾಳ, ಮೋಹನ ಚಿನ್ನಾ, ನಾಗರಾಜ ಚಿನ್ನಾ, ಸಿದ್ದು ನಾಗೂರ, ವೈಜನಾಥ ಸಂಗಾವಿ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.