ಕಲಬುರಗಿ: ‘ಸಾಮರಸ್ಯದ ಬದುಕಿಗೆ ಜಾತ್ರೆಗಳು ಪೂರಕ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಕಾಳಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ತಾಲ್ಲೂಕಿನ ಕಾಳನೂರಿನಲ್ಲಿ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವುದು ನೋವಿನ ಸಂಗತಿ. ಮಾನವ ಕಲ್ಯಾಣವೇ ಎಲ್ಲ ಧರ್ಮಗಳ ಗುರಿ. ಇದನ್ನು ಅರಿತು ನಡೆಯಬೇಕು. ವೈವಿಧ್ಯತೆಯಲ್ಲಿ ಏಕತೆ ಭಾರತೀಯ ಸಂಸ್ಕೃತಿಯ ವಿಶಿಷ್ಟತೆಯಾಗಿದೆ. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಬೇಕಾದರೆ ಎಲ್ಲರೂ ಸಾಮರಸ್ಯದಿಂದ ಬದುಕಬೇಕು ಎಂದು ಹೇಳಿದರು.
ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ,‘ಕಾಳನೂರಿನಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ದೊರಕಿದೆ. ಕೆಲವೇ ದಿನಗಳಲ್ಲಿ ನಿರ್ಮಾಣ ಕೆಲಸ ಆರಂಭಿಸಲಾಗುವುದು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.
ಹಾರಕೂಡ ಚನ್ನಬಸವೇಶ್ವರ ಪುರಾಣ ಪ್ರವಚನವನ್ನು ಅಷ್ಟಗಿ ನಿಜಲಿಂಗ ಶಿವಾಚಾರ್ಯರು ಮಂಗಲಗೊಳಿಸಿದರು.
ಮುಗಳನಾಗಾವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು.
ಸ್ಟೇಷನ್ ಬಬಲಾದದ ಶಿವಮೂರ್ತಿ ಶಿವಾಚಾರ್ಯರು, ರೇವಣಸಿದ್ಧ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ಗಿರಿಯಪ್ಪ ಮುತ್ಯಾ, ಶಿವಶರಣಪ್ಪ ಸೀರಿ, ಸಂತೋಷ ಡಾಬಾ, ರಮೇಶ ತೇಗಿನಮನಿ, ಪ್ರಭು ರಾವೂರ, ಪವನ ಜೀತೇಂದ್ರ ರಾಠೋಡ, ಕುಸನೂರಿನ ವೀರೇಶ ಪಾಟೀಲ, ಮಲ್ಲಯ್ಯ ಮುತ್ಯಾ, ಸುನಿತಾ ಸೂರ್ಯಕಾಂತ ಪಾಟೀಲ ಪಾಳ, ಬೋರಮ್ಮ, ಸುಗಲಾಬಾಯಿ ಪೂಜಾರಿ, ಶೀಲಾಬಾಯಿ ರಾಠೋಡ ಇದ್ದರು.
ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.