ADVERTISEMENT

ಕೃಷಿ ಸಾಹಿತ್ಯ ಸಮ್ಮೇಳನ ನಡೆಯಲಿ: ಸಿದ್ರಾಮಪ್ಪ ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:00 IST
Last Updated 17 ಜೂನ್ 2024, 16:00 IST
ಕಲಬುರಗಿ ಕನ್ನಡ ಭವನದಲ್ಲಿ ಸೋಮವಾರ ನಡೆದ ಕಾವ್ಯಮೇಳವನ್ನು ನಿವೃತ್ತ ಪ್ರಾಧ್ಯಾಪಕ ಕಲ್ಲಿನಾಥ ಪಾಟೀಲ ಉದ್ಘಾಟಿಸಿದರು
ಕಲಬುರಗಿ ಕನ್ನಡ ಭವನದಲ್ಲಿ ಸೋಮವಾರ ನಡೆದ ಕಾವ್ಯಮೇಳವನ್ನು ನಿವೃತ್ತ ಪ್ರಾಧ್ಯಾಪಕ ಕಲ್ಲಿನಾಥ ಪಾಟೀಲ ಉದ್ಘಾಟಿಸಿದರು   

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಕವಿಮೇಳ ಕಾವ್ಯಮಳೆ–2024 ನಡೆಯಿತು.

ಮೇಳದಲ್ಲಿ ಮಾತನಾಡಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ‘ಕೃಷಿ ಸಾಹಿತ್ಯ ಹೆಚ್ಚಾಗಿ ಬೆಳೆದು ಬಂದಾಗ ರೈತರಿಗೆ ಉಪಯುಕ್ತ ಮಾಹಿತಿ ದೊರೆಯುತ್ತದೆ. ರೈತರು ಸಾವಯವ ಕೃಷಿಗೆ ಮುಂದಾಗಬೇಕು. ಬದುಕು ಕಟ್ಟಿಕೊಡುವ ಕೃಷಿ ಸಾಹಿತ್ಯದ ಪ್ರೋತ್ಸಾಹಕ್ಕಾಗಿ ಜಿಲ್ಲಾ ಕೃಷಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕು’ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಕೃಷಿ ಕುರಿತಾದ ಅರ್ಥಪೂರ್ಣ ಚಿಂತನೆಗಳು ರೈತಾಪಿ ವರ್ಗಕ್ಕೆ ತಲುಪಿಸುವ ಉದ್ದೇಶದಿಂದ ಮುಂಬರುವ ಆಗಸ್ಟ್‌ನಲ್ಲಿ ಜಿಲ್ಲಾ ಮಟ್ಟದ ಕೃಷಿ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಕಸಾಪ ತಾಲ್ಲೂಕು ಅಧ್ಯಕ್ಷ ಗುರುಬಸಪ್ಪ ಎಸ್.ಸಜ್ಜನಶೆಟ್ಟಿ ಮಾತನಾಡಿ, ‘ಇಂದು ರೈತ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹಾಗಾಗಿ, ಕೃಷಿ ಕ್ಷೇತ್ರದ ಉಳಿವಿಗಾಗಿ ಶ್ರಮಿಸಬೇಕಾಗಿದೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಕಲ್ಲಿನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಹೈನು ಮಹಾವಿದ್ಯಾಲಯದ ಪ್ರಾಧ್ಯಾಪಕ ಮಲ್ಲಿನಾಥ ಹೆಮಾಡಿ, ವಿಶಾಲಾಕ್ಷಿ ಮಾಯಣ್ಣವರ್, ಕುಪೇಂದ್ರ ಬರಗಾಲಿ ಹಾಜರಿದ್ದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಅನೇಕ ಕವಿಗಳು ಮಳೆ, ರೈತರ ಸಮಸ್ಯೆ, ರೈತರ ಬದುಕು ಕುರಿತು ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.