ಕಲಬುರಗಿ: ‘ಕೋವಿಡ್ ಸಾಂಕ್ರಾಮಿಕ ರೋಗ ಬಂದಿದ್ದ ಸಂದರ್ಭದಲ್ಲಿ ಮಂದಿರ, ಚರ್ಚ್ ಹಾಗೂ ಮಸೀದಿಗಳಿಗೆ ಬೀಗ ಹಾಕಿದ್ದಾಗ ದೇವರು ಎಲ್ಲಿ ಹೋಗಿದ್ದರು’ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಪ್ರಶ್ನಿಸಿದರು.
ಇಲ್ಲಿ ಭಾನುವಾರ ನಡೆದ 12ನೇ ರಾಜ್ಯಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿ– 3ರ ‘ಕಲ್ಲು ದೇವರು ದೇವರಲ್ಲ’ ಕುರಿತು ಮಾತನಾಡಿದ ಅವರು, ‘ಮನುಸ್ಸು ಪರಿವರ್ತನೆ ಮಾಡದ ದೇವರ ಅಸ್ತಿತ್ವ ಎಲ್ಲಿದೆ? ದೇಹಕ್ಕೆ ಕಾಯಿಲೆ ಬಂದರೆ ಸರಿ ಹೋಗುತ್ತದೆ. ಆದರೆ, ಮನಸ್ಸಿಗೆ ಕಾಯಿಲೆ ಬಂದರೆ ದೇವರ ಅಪ್ಪ ಬಂದರೂ ಸಾಧ್ಯವಿಲ್ಲ’ ಎಂದರು.
‘ಕಳಬೇಡ ಎನ್ನುವ ವಚನ ಮೈಗೂಡಿಸಿಕೊಂಡಿದ್ದರೆ ಇವತ್ತು ಪೊಲೀಸ್ ಠಾಣೆಗಳೇ ಬರುತ್ತಿರಲಿಲ್ಲ. ಕಲ್ಲು ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವ ಬದಲು ತಂದೆ–ತಾಯಿಗಳನ್ನು ಉಳಿಸಿಕೊಳ್ಳಬೇಕು. ವಿಜ್ಞಾನ ಮುಂದುವರಿದಿದ್ದು, ಮಂಗಳ ಗ್ರಹದಲ್ಲಿ ಮನೆ ಮಾಡಿ, ಭೂಮಿ ತವರು ಮನೆಯಾಗುವ ಕಾಲ ದೂರವಿಲ್ಲ. ಹೀಗಾಗಿ, ಪಂಚಾಂಗ ಬದಲು ಪಂಚ ಅಂಗಗಳತ್ತ ಗಮನ ಕೊಡಿ’ ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯೆ ನೀಲಾಂಬಿಕಾ ಪೊಲೀಸ್ ಪಾಟೀಲ ‘ಅನುಭವ ಮಂಟಪ ಅನುವು ಮಾಡಿದಾತ’ ಕುರಿತು ಮಾತನಾಡಿದರು. ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕಿ ಶಿವಗಂಗಾ ರುಮ್ಮಾ ಅಧ್ಯಕ್ಷತೆ ವಹಿಸಿದ್ದರು. ಅಮೃತಾ ಕಟಕೆ, ಕಮಲಾಬಾಯಿ ರವೀಂದ್ರ ಶಾಬಾದಿ ಉಪಸ್ಥಿತರಿದ್ದರು. ಸಾಕ್ಷಿ ಶಿವರಂಜನ ಸತ್ಯಂಪೇಟೆ ನಿರೂಪಿಸಿ, ಸಂಜಯ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.