ADVERTISEMENT

ಘತ್ತರಗಾ ಬ್ಯಾರೇಜ್‌ನಿಂದ ನೀರು ಬಿಡುವವರೆಗೂ ಧರಣಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:18 IST
Last Updated 27 ಮಾರ್ಚ್ 2024, 16:18 IST
ಅಫಜಲಪುರ ತಾಲ್ಲೂಕಿನ ಗುಡ್ಡೇವಾಡಿ ಗ್ರಾಮದ ಹತ್ತಿರ ಭೀಮಾ ನದಿಯಲ್ಲಿ ಪ್ರಾಂತ ರೈತ ಸಂಘದವರು  ನೀರು ಹರಿಸುವಂತೆ ಧರಣಿ ಕುಳಿತಿರುವುದು
ಅಫಜಲಪುರ ತಾಲ್ಲೂಕಿನ ಗುಡ್ಡೇವಾಡಿ ಗ್ರಾಮದ ಹತ್ತಿರ ಭೀಮಾ ನದಿಯಲ್ಲಿ ಪ್ರಾಂತ ರೈತ ಸಂಘದವರು  ನೀರು ಹರಿಸುವಂತೆ ಧರಣಿ ಕುಳಿತಿರುವುದು    

ಅಫಜಲಪುರ: ‘ಭೀಮಾ ಬ್ಯಾರೇಜಿನ ಕೆಳಭಾಗದ ರೈತರಿಗೆ ಇದುವರೆಗೂ ನೀರು ಹರಿದಿಲ್ಲ. ಭೀಮಾನದಿ ಕೆಳಗಿನ ಭಾಗದ 10 ಹಳ್ಳಿಗಳ ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಭೀಮಾ ನದಿಗೆ ನೀರು ಹರಿಸುವಂತೆ ಸುಮಾರು 15 ದಿನಗಳಿಂದ ನಿರಂತರವಾಗಿ ಬತ್ತಿರುವ ಭೀಮಾನದಿಯಲ್ಲಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ, ನಮ್ಮ ಕೂಗಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದು ರೈತ ಮುಖಂಡರು ಬೇಸರಿಸಿದರು.

ಘತ್ತರಗಾ ಬ್ಯಾರೇಜ್‌ನಿಂದ ಕೆಳಗಡೆ ಇರುವ ಗ್ರಾಮಗಳಿಗೆ ನೀರು ಬಿಡುವವರೆಗೂ ಗುಡ್ಡೆವಾಡಿ ಗ್ರಾಮದ ಭೀಮಾ ನದಿ ದಡದಲ್ಲಿ ಧರಣಿ ಸತ್ಯಾಗ್ರಹ ಮುಂದುವರಿಯುತ್ತದೆ. ತಕ್ಷಣ ಜಿಲ್ಲಾಡಳಿತ ಘತ್ತರಗಾ ಬ್ಯಾರೇಜ್‌ನಿಂದ ನೀರು ಬಿಡಲು ಆದೇಶಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದವರು ಒತ್ತಾಯಿಸಿದರು.

‘ಕೊಳ್ಳೂರು, ಗುಡ್ಡೇವಾಡಿ, ಹುಲ್ಲೂರ್, ಹರನಾಳ, ಗಾಣಗಾಪುರ, ದೇಸಾಯಿ ಕಲ್ಲೂರ್, ಕೆರೆಕನಹಳ್ಳಿ, ಬಟಿಗೇರಿ ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯಲು ನೀರು ಬಿಡುತ್ತೇವೆ ಎಂದು ಆದೇಶಿಸಿದಾಗ ಮಾತ್ರ ಸತ್ಯಾಗ್ರಹ ಹಿಂಪಡೆಯುತ್ತೇವೆ’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶ್ರೀಮಂತ್ ಬಿರಾದಾರ್ ಹಾಗೂ ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ದು ದಣ್ಣೂರ ಹೇಳಿದರು.

ADVERTISEMENT

ರೈತ ಮುಖಂಡರಾದ ಗುರು ಚಾಂದಕೋಟೆ, ಅಶೋಕ್ ಹೂಗಾರ್ ಮಾತನಾಡಿ, ‘ಭೀಮಾ ನದಿ ಕೆಳಭಾಗದ ರೈತರು ಸುಮಾರು 3 ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಲ್ಲಿಯವರೆಗೆ ಆಡಳಿತ ಸ್ಪಂದನೆ ಮಾಡಿಲ್ಲ. ಈ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ’ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.