ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಾಲಾಶ್ರೀ ಮಲ್ಲಿನಾಥ (31) ಅವರ ಸಾವಿಗೆ ಆರೋಗ್ಯ ಕೇಂದ್ರದ ಡಿ ದರ್ಜೆ ನೌಕರ ನಾಗಪ್ಪ ಎಂಬಾತನೇ ಕಾರಣ ಎಂದು ಮೃತ ಮಹಿಳೆಯ ತಂದೆ ಮಲ್ಲಿನಾಥ ಪರೀಟ್ ಅವರು ಕುಂಚಾವರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಮಂಗಳವಾರ ಸಂಜೆ ನರ್ಸ್ ಮೃತದೇಹ ವಸತಿಗೃಹದಲ್ಲಿ ಪತ್ತೆಯಾಗಿತ್ತು. ಪೊಲೀಸರು ಆಕೆಯ ತಂದೆ ಮಲ್ಲಿನಾಥ ಅವರಿಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ತೆರಳಿದ್ದ ಮಲ್ಲಿನಾಥ ಅವರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅಭಿಪ್ರಾಯಕ್ಕೆ ಬಂದಿದ್ದರು.
‘ನಾಗಪ್ಪ ಆಗಾಗ ಮಗಳು ಮಾಲಾಶ್ರೀಯೊಂದಿಗೆ ನಮ್ಮೂರು ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾಮಕ್ಕೆ ಬರುತ್ತಿದ್ದ. ಆಗಾಗ ಸುಮಾರು 30 ನಿಮಿಷಗಳವರೆಗೆ ಮಗಳೊಂದಿಗೆ ಮಾತನಾಡುತ್ತಿದ್ದ. ಮಾಲಾಶ್ರೀಯನ್ನು ಮದುವೆಯಾಗುವುದಾಗಿ ನಂಬಿಸಿ ಅನೇಕ ಕಡೆ ಸುತ್ತಾಡಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮೂರು ತಿಂಗಳ ಹಿಂದೆ ಬೇರೆ ಮದುವೆ ಮಾಡಿಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದಾಗ ಕಿರುಕುಳ ಕೊಟ್ಟಿದ್ದಾನೆ. ಮಾಲಾಶ್ರೀ ಬದುಕಿದ್ದರೆ ತನ್ನ ಸಂಸಾರಕ್ಕೆ ತೊಂದರೆ ಮಾಡುತ್ತಾಳೆ ಎಂದು ಭಾವಿಸಿ ನೇಣು ಹಾಕಿ ಕೊಲೆ ಮಾಡಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕುಂಚಾವರಂ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.