ಅಫಜಲಪುರ: ಪಟ್ಟಣದಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ್ದರಿಂದ ಚರಂಡಿಗಳು ಮಳೆ ನೀರು ಮತ್ತು ತ್ಯಾಜ್ಯ ವಸ್ತುಗಳಿಂದ ತುಂಬಿಕೊಳ್ಳುತ್ತಿವೆ. ಬಸವೇಶ್ವರ ಸರ್ಕಲ್ದಲ್ಲಿರುವ ಚರಂಡಿ ತುಂಬಿಕೊಂಡಿರುವುದರಿಂದ ಕೊಳಚೆ ನೀರು ನ್ಯಾಯಾಧೀಶರ ಮನೆಗೆ ನುಗ್ಗಿತ್ತು. ಬುಧವಾರ ತರಾತುರಿಯಲ್ಲಿ ಪುರಸಭೆ ಎಂಜಿನಿಯರ್ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಿಕಾಂತ್ ಬಿರಾದಾರ್ ಹಾಗೂ ಇತರೆ ಸಿಬ್ಬಂದಿ ಚರಂಡಿ ದುರಸ್ತಿ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನಡೆಸಿದ್ದಾರೆ.
ಪುರಸಭೆಯವರು ಚರಂಡಿ ದುರಸ್ತಿ ಕಾರ್ಯದಲ್ಲಿ ಎರಡು ಜೆಸಿಬಿ, ಮೂರು ಟ್ರ್ಯಾಕ್ಟರ್ ಬಳಸಿ ಹಲವಾರು ಸಿಬ್ಬಂದಿ ಕೆಲಸ ನಿರ್ವಹಿಸಿದರು. ‘ಪಟ್ಟಣದಲ್ಲಿಯ ಚರಂಡಿಗಳು ತುಂಬಿಕೊಂಡಿವೆ, ದುರಸ್ತಿ ಮಾಡಿ ಎಂದು ಹೋರಾಟ ಮಾಡಿದ್ದೇವೆ. ಪುರಸಭೆಗೆ ದೂರು ನೀಡಿದ್ದೇವೆ ಆದರೂ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ತಿಳಿಸಿದರು.
ಚರಂಡಿ ದುರಸ್ತಿ ಕಾರ್ಯ ಮಾಡುತ್ತಿರುವ ಪುರಸಭೆಯ ಎಂಜಿನಿಯರ್ ಅಜಯ್ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಿಕಾಂತ್ ಬಿರಾದಾರ್ ಅವರನ್ನು ವಿಚಾರಿಸಿದಾಗ ಬಸವೇಶ್ವರ ಸರ್ಕಲ್ನಲ್ಲಿರುವ ಸರ್ಕಾರಿ ಕೊಠಡಿಗಳ ಬದಿಯಲ್ಲಿರುವ ಚರಂಡಿ ತುಂಬಿಕೊಂಡು ನ್ಯಾಯಾಧೀಶರ ಮನೆಗೆ ನೀರು ಹೋಗುತ್ತಿದೆ. ಅದಕ್ಕಾಗಿ ಚರಂಡಿ ದುರಸ್ತಿ ಮಾಡುತ್ತೇವೆ ಎಂದು ತಿಳಿಸಿದರು. ಅದರಂತೆ ಪಟ್ಟಣದ ಪ್ರತಿ ವಾರ್ಡ್ಗಳಲ್ಲಿ ಚರಂಡಿಗಳು ತುಂಬಿಕೊಂಡಿವೆ, ಅವುಗಳನ್ನು ದುರಸ್ತಿ ಮಾಡಿ ಎಂದು ಕೇಳಿದಾಗ ಅಧಿಕಾರಿಗಳು ಮೌನವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.