ಕಮಲಾಪುರ: ಆಳಂದ ತಾಲ್ಲೂಕಿನ ಕಮಲಾನಗರ ಗ್ರಾಮದಲ್ಲಿ ಪ್ರವಾಹದ ನೀರು ಹೊಕ್ಕು ಜೋಡೆತ್ತು ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರೈತ ಕಲ್ಯಾಣಿ ಬಸವರಾಜ ಕೆರುಳ್ಳಿ ಎಂಬುವವರ ಎರಡು ಎತ್ತುಗಳು ಮೃತಪಟ್ಟು ಕೃಷಿ ಪರಿಕರಗಳು ಕೊಚ್ಚಿಹೋಗಿವೆ. ಸುಮಾರು ₹1.50 ಲಕ್ಷ ಹಾನಿಯಾಗಿದೆ.
ಕಲ್ಯಾಣಿ ಅವರು ಮಂಗಳವಾರ ಸಂಜೆ ತಮ್ಮ ಜಮೀನಿನ ಕೊಟ್ಟಿಗೆಯಲ್ಲಿ ಎತ್ತುಗಳನ್ನು ಕಟ್ಟಿ ಮನೆಗೆ ಬಂದಿದ್ದರು. ರಾತ್ರಿಯಿಡೀ ರಭಸದಿಂದ ಮಳೆ ಸುರಿದಿದೆ. ಕಮಲಾನಗರ ಬೆಡಜುರ್ಗಿ ಮಧ್ಯದ ಗಡಿಹಳ್ಳಕ್ಕೆ ಪ್ರವಾಹ ಉಂಟಾಗಿದೆ. ಪ್ರವಾಹದ ನೀರು ದನದ ಕೊಟ್ಟಿಗೆಗೆ ಹೊಕ್ಕಿ ಉಸಿರು ಗಟ್ಟಿ ಸ್ಥಳದಲ್ಲೇ ಮೃತಪಟ್ಟಿವೆ.
‘ಸುಮಾರು ₹1 ಲಕ್ಷ ಮೌಲ್ಯದ ಎತ್ತು ಹಾಗೂ ₹50 ಸಾವಿರ ಮೌಲ್ಯದ ಪಂಪ್ಸೆಟ್, ಸ್ಪಿಂಕ್ಲರ್ ಪೈಪ್ ಕೊಚ್ಚಿ ಹೋಗಿವೆ’ ಎಂದು ರೈತ ಕಲ್ಯಾಣಿ ತಿಳಿಸಿದರು.
ಪಶು ವೈದ್ಯಾಧಿಕಾರಿ ಬಸವರಾಜ ಸಪ್ಪಾಣಿ, ಕಂದಾಯ ನಿರೀಕ್ಷಕ ಮಲ್ಲಿನಾಥ ಮರಗುತ್ತಿ, ಗ್ರಾಮ ಲೆಕ್ಕಾಧಿಕಾರಿ ಸುನಿತಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.