ಶಹಾಬಾದ್: ನೀಟ್ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಕೂಗು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರಿಂದ ಕೇಳಿ ಬಂದಿದೆ. ಪಾಟ್ನಾ ಮತ್ತು ಇತರೆ ಪ್ರದೇಶಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಸರ್ಕಾರ ಅಥವಾ ಎನ್ಟಿಎ ಯಾವುದೇ ಗಂಭೀರ ತನಿಖೆ ಕೈಗೊಂಡಿಲ್ಲ. ಬದಲಿಗೆ, ಯಾವುದೇ ಭ್ರಷ್ಟಾಚಾರವು ನಡೆದಿಲ್ಲವೆಂದು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ ಕ್ಲೀನ್ಚಿಟ್ ನೀಡಿರುವುದನ್ನು ಖಂಡಿಸುತ್ತೇವೆ. ವಿದ್ಯಾರ್ಥಿಗಳ ಹೆಚ್ಚುವರಿ ಅಂಕಗಳನ್ನು ರದ್ದು ಮಾಡುವುದು ಮತ್ತು ಅವರಿಗೆ ಮರು-ಪರೀಕ್ಷೆ ನಡೆಸುವ ನಿರ್ಧಾರವನ್ನು ವಿದ್ಯಾರ್ಥಿ ಸಮೂಹವು ಒಪ್ಪುವುದಿಲ್ಲ’ ಎಂದು ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಹೇಳಿದರು.
ನಗರದ ನೆಹರು ವೃತ್ತದಲ್ಲಿ ಎಐಡಿಎಸ್ಒ ತಾಲ್ಲೂಕು ಸಮಿತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಒ ಕಾರ್ಯದರ್ಶಿ ಅಜಯ್ ಎ.ಜಿ, ಉಪಾಧ್ಯಕ್ಷ ದೇವರಾಜ್ ಎಸ್, ಸದಸ್ಯರಾದ ಬಾಬೂ ಪವರ್, ಸ್ಪೂರ್ತಿ ಆರ್.ಜಿ, ಸೃಷ್ಠಿ ಆರ್.ಜಿ, ವಿದ್ಯಾರ್ಥಿಗಳಾದ ನಿಂಗರಾಜು ಹಾಗೂ ಹಲವಾರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.