ADVERTISEMENT

ಬಜೆಟ್‌ನಲ್ಲಿ ಈಡಿಗ- ಬಿಲ್ಲವ ನಿಗಮಕ್ಕೆ ಅನುದಾನ ನೀಡದ ಸರ್ಕಾರ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 15:28 IST
Last Updated 18 ಫೆಬ್ರುವರಿ 2024, 15:28 IST

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿಲ್ಲ. ಈ ಮೂಲಕ ಸರ್ಕಾರ ಈಡಿಗ ಸಮುದಾಯಕ್ಕೆ ಮೋಸ ಮಾಡಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈಡಿಗ-ಬಿಲ್ಲವರಿಗೆ ₹ 250 ಕೋಟಿ ಹಾಗೂ ಬಂಟರ ನಿಗಮಕ್ಕೆ ₹250 ಕೋಟಿ ಅನುದಾನ ನೀಲಾಗುವುದು ಎಂದು ಮಂಗಳೂರಿನಲ್ಲಿ ವಾಗ್ದಾನ ಮಾಡಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡಿಗ–ಬಿಲ್ಲವ ಸೇರಿದಂತೆ 26 ಪಂಗಡಗಳ 70 ಲಕ್ಷ ಸಂಖ್ಯೆಯ ಜನರಿಗೆ ಪಂಗನಾಮ ಹಾಕಿದ್ದಾರೆ. ಈ ಸರ್ಕಾರ ಆಡಳಿತಕ್ಕೆ ಬಂದು 2ನೇ ಬಜೆಟ್ ಮಂಡಿಸಿದರೂ ಅನುದಾನ ನೀಡದೆ ಸಮಾಜವನ್ನು ಕಡೆಗಣಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನವನ್ನು ಮರೆತ ವಚನಭ್ರಷ್ಟ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಸಮಿತಿ ಅಧ್ಯಕ್ಷ ಸತೀಶ್ ವಿ. ಗುತ್ತೇದಾರ ಮತ್ತು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎಂ. ಕಡೇಚೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಹೋರಾಟ ಸಮಿತಿಯು ಕರ್ನಾಟಕ ಪ್ರದೇಶ ಈಡಿಗ ಸಂಘ, ಅಖಿಲ ಭಾರತ ಬಿಲ್ಲವ ಅಸೋಸಿಯೇಷನ್, ಬಿಲ್ಲವ ಸಮಾಜ ಹಾಗೂ ನಾಮಧಾರಿ, ಧೀವರ, ನಾಯಕ ಸೇರಿದಂತೆ ಉಪ ಪಂಗಡಗಳ ಜತೆ ಚರ್ಚಿಸಲು ನಿರ್ಧರಿಸಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರಮುಖರು ಸೇರಿಕೊಂಡು ಪ್ರಣವಾನಂದ ಶ್ರೀಗಳ ಸಮ್ಮುಖದಲ್ಲಿ ಶೀಘ್ರದಲ್ಲಿ ಸಭೆ ಸೇರಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.