ಕಲಬುರಗಿ: ಬ್ಲೂಟೂತ್ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆಯಲು ನೆರವಾಗಿದ್ದ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರದ ಸಮಾಜ ಕಲ್ಯಾಣ ಇಲಾಖೆಯ ವೃತ್ತಿಪರ ವಸತಿ ನಿಲಯದ ವಾರ್ಡನ್ ಬಸವರಾಜ ಯಾಳವಾರ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಆಪ್ತನಾಗಿದ್ದ ಬಸವರಾಜ, ಅಫಜಲಪುರ ತಾಲ್ಲೂಕಿನ ಸಾಗನೂರು ಗ್ರಾಮದ ನಿವಾಸಿ. ಆರ್.ಡಿ. ಪಾಟೀಲ ಪರವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಅಫಜಲಪುರದ ರಾಯಲ್ ಪಬ್ಲಿಕ್ ಶಾಲಾ ಕೇಂದ್ರದ ಮುಖ್ಯಸ್ಥನಾಗಿದ್ದ ಚಂದ್ರಕಾಂತ ಹಾಗೂ ಕಸ್ಟೋಡಿಯನ್ ಆಗಿದ್ದ ಬಸಣ್ಣ (ಬಸವರಾಜ) ಪೂಜಾರಿಗೆ ₹ 40 ಲಕ್ಷ ನೀಡಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಸಿಐಡಿ ಪೊಲೀಸ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರ್.ಡಿ. ಪಾಟೀಲ ಸೇರಿ 12 ಮಂದಿ ವಿರುದ್ಧ 2023ರ ಡಿಸೆಂಬರ್ನಲ್ಲಿ ‘ಕೋಕಾ’ ಪ್ರಕರಣ ದಾಖಲಾಗಿತ್ತು. ಆ ಬಳಿಕ ಬಸವರಾಜ ತಲೆ ಮರೆಸಿಕೊಂಡಿದ್ದ. ತಿಂಗಳ ಹಿಂದೆ ವಾರ್ಡನ್ ಆಗಿ ಸೇರ್ಪಡೆಯಾಗಿದ್ದ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.