ADVERTISEMENT

ಕಲಬುರಗಿ | ಸತತ ಮಳೆ: ಹಿಂಗಾರು ಬೆಳೆಗಳ ಬಿತ್ತನೆಗೆ ಅಡ್ಡಿ

ಮಲ್ಲಿಕಾರ್ಜುನ ನಾಲವಾರ
Published 28 ಅಕ್ಟೋಬರ್ 2024, 4:37 IST
Last Updated 28 ಅಕ್ಟೋಬರ್ 2024, 4:37 IST
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹೊಲವೊಂದರಲ್ಲಿ ನಿಂತ ಮಳೆ ನೀರು
ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಹೊಲವೊಂದರಲ್ಲಿ ನಿಂತ ಮಳೆ ನೀರು   

ಕಲಬುರಗಿ: ಜಿಲ್ಲೆಯಾದ್ಯಂತ ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಬಿದ್ದಿದ್ದು, ಮಣ್ಣಲ್ಲಿನ ತೇವಾಂಶ ಹೆಚ್ಚಳದಿಂದಾಗಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಕೆಲವೆಡೆ ಬಿತ್ತನೆ ಶುರುವಾಗಿದ್ದರೆ, ಇನ್ನೂ ಕೆಲವೆಡೆ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಕಡಲೆ ಬಿತ್ತನೆ ಮಾಡಿದ ರೈತರಲ್ಲಿ ಸತತ ಮಳೆಯು ಆತಂಕ ಉಂಟುಮಾಡಿದೆ.

ಅಕ್ಟೋಬರ್ 19ರವರೆಗೆ ವಾಡಿಕೆಯ 724 ಮಿ.ಮೀ. ಮಳೆ ಆಗಬೇಕಿತ್ತು. ಇಲ್ಲಿಯವರೆಗೂ 804 ಮಿ.ಮೀ. (ಶೇ 11ರಷ್ಟು) ಮಳೆ ಬಿದ್ದಿದೆ. ಆಗಸ್ಟ್‌ (ಶೇ –12ರಷ್ಟು) ಮತ್ತು ಸೆಪ್ಟೆಂಬರ್ (ಶೇ –4ರಷ್ಟು) ಹೊರತುಪಡಿಸಿ ಉಳಿದ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಹೀಗಾಗಿ, ರೈತರ ಮೊಗದಲ್ಲಿ ಸಂತಸ ಮೂಡಿದ್ದರೂ ಮಣ್ಣಲ್ಲಿ ಹೆಚ್ಚಿರುವ ತೇವಾಂಶದಿಂದಾಗಿ ಇಳುವರಿ ಕುಸಿತ ಆಗುಬಹುದು ಎಂಬ ಕಳವಳವೂ ಕಾಡುತ್ತಿದೆ.

ಅಕ್ಟೋಬರ್‌ ಆರಂಭದಲ್ಲೇ ಕಡಲೆ ಬಿತ್ತನೆಯಾಗಿದ್ದರೆ ಉತ್ತಮ ಫಸಲು ಬರುತ್ತಿತ್ತು. ಸತತ ಮಳೆಯಿಂದಾಗಿ ಕಡಲೆ ಬಿತ್ತನೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಹೆಸರು, ಉದ್ದು ಬೆಳೆದು ಎರಡನೇ ಬೆಳೆಯಾಗಿ ಕಡಲೆ ಬಿತ್ತದವರ ಪೈಕಿ ಬಹುತೇಕರು ಆರ್ಥಿಕ ಹೊರೆಗೆ ಸಿಲುಕಿದ್ದಾರೆ ಎನ್ನುತ್ತಾರೆ ರೈತರು.

ADVERTISEMENT

‘ಉತ್ತರಿ ಮಳೆಯಲ್ಲಿ ಕಡಲೆ ಬಿತ್ತುವುದು ವಾಡಿಕೆ ಇದೆ. ಈ ಬಾರಿ ಉತ್ತರಿ ಮಳೆಯಿಂದಾಗಿ ತೇವಾಂಶ ಹೆಚ್ಚಳವಾಯಿತು. ಹೀಗಾಗಿ, ಸುಮಾರು 20 ದಿನಗಳು ತಡವಾಗಿ ಕಡಲೆ ಬಿತ್ತನೆ ಮಾಡಿದ್ದೇವೆ. ಸದ್ಯ 3–4 ಇಂಚು ಕಡಲೆ ಬೆಳೆಗಳು ಬೆಳೆದು ನಿಂತಿವೆ. ಸತತ ಮಳೆಗೆ ಬಾಡುವ ಆತಂಕವಿದೆ. ತಡವಾಗಿ ಬಿತ್ತಿದ ಹೊಲಗಳಲ್ಲಿ ಮಳೆಯಿಂದಾಗಿ ಮೊಳಕೆಗಳು ಹೊರಬಂದಿಲ್ಲ’ ಎನ್ನುತ್ತಾರೆ ಚಿತ್ತಾಪುರದ ರೈತ ಮನೋಹರ.

‘₹ 7,300 ಕೊಟ್ಟು ಒಂದು ಕ್ವಿಂಟಲ್ ಕಡಲೆ ಬಿಜ, ₹ 1,300ರಂತೆ ನಾಲ್ಕು ಚೀಲ ಗೊಬ್ಬರ, ಎಕರೆಗೆ ₹ 500ರಂತೆ ಟ್ರ್ಯಾಕ್ಟರ್‌ ಬಾಡಿಗೆ ಕೊಟ್ಟು ಐದು ಎಕರೆಯಲ್ಲಿ ಕಡಲೆ ಬಿತ್ತನೆ ಮಾಡಿದ್ದೇನೆ. ನಿರೀಕ್ಷೆಯಂತೆ ಫಸಲು ಬಾರದೆ ಇದ್ದರೆ ಆರ್ಥಿಕ ಹೊರೆ ಬೀಳುತ್ತದೆ’ ಎಂದರು.

ಶೇ 17ರಷ್ಟು ಬಿತ್ತನೆ: ಜಿಲ್ಲಾ ಕೃಷಿ ಇಲಾಖೆಯು ಹಿಂಗಾರು ಹಂಗಾಮಿನ ಏಕದಳ, ದ್ವಿದಳ ಹಾಗೂ ಎಣ್ಣೆ ಕಾಳು ಬೆಳೆಗಳ ಬಿತ್ತನೆ ಗುರಿ 2,17,635 ಹೆಕ್ಟೇರ್‌ ಇರಿಸಿಕೊಂಡಿದೆ. ಈ ಪೈಕಿ ಈಗಾಗಲೇ 36,324 ಹೆಕ್ಟೇರ್ (ಶೇ 17ರಷ್ಟು) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲಿ ಕಡಲೆ ಬಿತ್ತನೆ ಪ್ರಮಾಣವೇ 24,025 ಹೆಕ್ಟೇರ್‌ನಷ್ಟಿದೆ. 1.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಅದರಲ್ಲಿ ಇದುವರೆಗೂ ಶೇ 22ರಷ್ಟು ಗುರಿ ಮುಟ್ಟಲಾಗಿದೆ.

ಹಿಂಗಾರು ಹಂಗಾಮಿನಲ್ಲಿ ಎರಡನೇ ಅಗ್ರ ಸ್ಥಾನ ಜೋಳಕ್ಕೆ ಇದ್ದು, ಇದುವರೆಗೂ 4,294 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಗುರಿ ಹಾಕಿಕೊಂಡ 76,750 ಹೆಕ್ಟೇರ್‌ ಪೈಕಿ ಶೇ 6ರಷ್ಟು ಬಿತ್ತನೆಯಾಗಿದೆ. ಎಣ್ಣೆಕಾಳು ಬೆಳೆಯಾದ ಶೇಂಗಾ ಬಿತ್ತನೆ ಪ್ರದೇಶ ಈ ವರ್ಷ ದುಪ್ಪಟ್ಟಾಗಿದೆ. 3,530 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೂ 7,250 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ 205ರಷ್ಟು ಗುರಿ ಸಾಧಿಸಲಾಗಿದೆ.

ಜೋಳಕ್ಕೂ ತಪ್ಪದ ಆತಂಕ:

‘ಜೋಳದ ಬೆಳೆ ಕಡಿಮೆ ತೇವಾಂಶ, ಕನಿಷ್ಠ ಮಳೆಯಲ್ಲಿ ಬೆಳೆದಷ್ಟು ಒಳ್ಳೆಯ ಫಸಲು ಕೊಡುತ್ತದೆ. ಅತಿಯಾದ ತೇವಾಂಶದಲ್ಲಿ ಬಿತ್ತನೆ ಮಾಡಿದರೆ ಅಥವಾ ಹೆಚ್ಚು ಮಳೆಯಾದರೆ ಜೋಳದ ದಂಟ್ಟು ಎತ್ತರವಾಗಿ ಬೆಳೆಯುತ್ತದೆ. ಆದರೆ, ತೆನೆಯ ಗಾತ್ರ ಚಿಕ್ಕದಾಗುವ ಸಾಧ್ಯತೆ ಇರುತ್ತದೆ’ ಎಂಬ ಅಭಿಪ್ರಾಯ ಹಿರಿಯ ರೈತರದ್ದು.

ಪರಿತಪಿಸುತ್ತಿರುವ ರೈತರು

ಚಿತ್ತಾಪುರ: ತಾಲ್ಲೂಕಿನಾದ್ಯಂತ ಹಿಂಗಾರು ಮಳೆ ಸತತವಾಗಿ ಬಂದಿದ್ದರಿಂದ ಭೂಮಿಯಲ್ಲಿ ತೇವಾಂಶ ಅಧಿಕಗೊಂಡು ಹಿಂಗಾರು ಬಿತ್ತನೆಗೆ ಅಡ್ಡಿಯಾಗಿದೆ. ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರು ಈಗ ಪರಿತಪಿಸುತ್ತಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿಯೇ ಕಡಲೆ ಬಿತ್ತನೆ ಕಾರ್ಯ ಆರಂಭಿಸಿದ್ದು ಎರಡ್ಮೂರು ದಿನಗಳಲ್ಲಿಯೇ ಮಳೆ ಶುರುವಾಗಿದ್ದರಿಂದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ.

ಕಡಲೆ ಬಿತ್ತನೆ ಮಾಡುತ್ತೇವೊ ಇಲ್ಲವೊ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ. ನಿರಂತರ ಮಳೆಗೆ ಹೊಲಗಳು ಕೆಸರು ಗದ್ದೆಯಂತಾಗಿವೆ. ಹೆಸರು ಉದ್ದು ರಾಶಿಯ ನಂತರ ಹಿಂಗಾರು ಬಿತ್ತನೆಗೆ ಹೊಲ ಹದಗೊಳಿಸುವ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಹುಲ್ಲು ಬೆಳೆದಿದ್ದು ರೈತರು ಸಂಕಟಕ್ಕೆ ಸಿಲುಕಿದ್ದಾರೆ. ಜೋಳ ಬಿತ್ತನೆಯೂ ಶುರುವಾಗಿಲ್ಲ. ಬೀಜ ಗೊಬ್ಬರದ ಸಿದ್ಧತೆ ಮಾಡಿಕೊಂಡಿದ್ದರೂ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿಲ್ಲ.

ಮತ್ತೆ ಮಳೆ ಬಂದರೆ ಬಿತ್ತನೆ ಮತ್ತಷ್ಟು ವಿಳಂಬವಾಗಲಿದೆ ಎಂಬುದು ರೈತರು ಕಳವಳ. ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಕಡಲೆ ಬೀಜ ವಿತರಣೆ ಮಾಡಿ ಬಿತ್ತನೆ ಪೂರ್ವ ಬೀಜೋಪಚಾರ ಕ್ರಮ ಪಾಲಿಸಬೇಕು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಅಗತ್ಯ ಸಿದ್ಧತೆ: ಸಮದ್ ಪಟೇಲ್

‘ಅಕ್ಟೋಬರ್‌ನಲ್ಲಿ ವಾಡಿಕೆಯಷ್ಟು ಉತ್ತಮ ಮಳೆಯಾಗಿದ್ದು ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಹೀಗಾಗಿ ಬಿತ್ತನೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಹಿಂಗಾರು ಬೆಳೆಗಳ ಬಿತ್ತನೆಗೆ ಅಗತ್ಯವಾದ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. 32501 ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದ್ದು 5988 ಮೆಟ್ರಿಕ್ ಟನ್ ಗೊಬ್ಬರವನ್ನು ವಿತರಣೆ ಮಾಡಲಾಗಿದೆ.

ಪ್ರಸ್ತುತ 25549 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ’ ಎಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸತತ ಮಳೆಗೆ ಕೆಲವೆಡೆ ಹತ್ತಿಯ ಕಾಯಿಗಳು ಉದುರಿ ಬಿದ್ದಿವೆ. ದೊಡ್ಡ ಮಟ್ಟದಲ್ಲಿ ಹಾನಿಯಾಗಿಲ್ಲ. ಮುಂದಿನ ವಾರದಿಂದ ತೊಗರಿ ಹತ್ತಿ ಕಡಲೆಯ ಸಮೀಕ್ಷೆ ಶುರುವಾಗಲಿದ್ದು ನಿಖರವಾದ ಮಾಹಿತಿ ಲಭ್ಯವಾಗಲಿದೆ’ ಎಂದರು.

ಮಣ್ಣಲ್ಲಿ ಹೆಚ್ಚಿದ ತೇವಾಂಶ

ಚಿಂಚೋಳಿ: ಜೋಳ ಬಿತ್ತನೆಗೆ ಚಿತ್ತಾ ಮಳೆ ಸಕಾಲವಾಗಿದ್ದು ಅಧಿಕ‌ ತೇವಾಂಶದಿಂದ ಬಿತ್ತನೆ ಪ್ರಾರಂಭವಾಗಿಲ್ಲ. ಉತ್ತರಿ ಮಳೆಯಲ್ಲಿ ಕಡಲೆ ಬಿತ್ತುವುದು ವಾಡಿಕೆ. ಸತತ ಮಳೆಯಿಂದ ಕಡಲೆ ಬಿತ್ತನೆಗೂ ತೊಂದರೆಯಾಗಿದೆ. ತಾಲ್ಲೂಕಿನಲ್ಲಿ ಅಧಿಕ ಮಳೆಯಿಂದ ತಗ್ಗುಪ್ರದೇಶದ ಹೊಲಗಳಲ್ಲಿನ ತೊಗರಿ ಹಾಳಾಗಿದೆ.

ರಾಶಿ ಸಮಯದಲ್ಲಿ ಮಳೆ ಬಿಡುವು ಕೊಡದೆ ಸುರಿದಿದ್ದರಿಂದ ಶೇ 75ರಷ್ಟು ಉದ್ದು ನೆಲದ ಪಾಲಾಗಿದೆ. ಹತ್ತಿ ಬೆಳೆಗೂ ಪ್ರತಿಕೂಲ‌ ಪರಿಣಾಮ ಉಂಟಾಗಿದೆ ಎನ್ನುತ್ತಾರೆ ರೈತರು. ತಾಲ್ಲೂಕಿನಲ್ಲಿ ಇಲ್ಲಿಯವರೆಗೂ 863 ಮಿ.ಮೀ. ಮಳೆ ಸುರಿಯಬೇಕಿತ್ತು. 821 ಮಿ.ಮೀ ಮಳೆಯಾಗಿದ್ದು ಶೇ 5ರಷ್ಟು ಕೊರತೆಯಾಗಿದೆ. ಹಿಂಗಾರು ಹಂಗಾಮಿನಲ್ಲಿ 22345 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 1020 ಹೆಕ್ಟೇರ್ ಬಿತ್ತನೆಯಾಗಿದೆ.

ಪೂರಕ ಮಾಹಿತಿ: ಜಗನ್ನಾಥ ಡಿ.ಶೇರಿಕಾರ, ಮಲ್ಲಿಕಾರ್ಜುನ ಎಚ್.ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.