ADVERTISEMENT

ಕಲಬುರಗಿ | ಇಬ್ಬರ ಬಂಧನ: ₹ 25 ಲಕ್ಷ ಮೌಲ್ಯದ ಮದ್ಯ ಜಪ್ತಿ

ಲಾರಿ ಅಪಘಾತವೆಂದು ಬಿಂಬಿಸಿ ₹ 63 ಲಕ್ಷ ಮೌಲ್ಯದ ಮದ್ಯ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:12 IST
Last Updated 23 ಜೂನ್ 2024, 16:12 IST
ಪ್ರಜ್ವಲ್
ಪ್ರಜ್ವಲ್   

ಕಲಬುರಗಿ: ಮದ್ಯ ಸಾಗಿಸುತ್ತಿದ್ದ ಲಾರಿ ಮಾರ್ಗ ಮಧ್ಯದಲ್ಲಿ ಉರುಳಿ ಬಿದ್ದು ಅಪಘಾತವಾಗಿದೆ ಎಂದು ಬಿಂಬಿಸಿ ₹ 63.16 ಲಕ್ಷ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ವಂಚಿಸಿದ ಆರೋಪದಡಿ ಫರಹತಾಬಾದ್ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬೀದರ್‌ ಜಿಲ್ಲೆಯ ಹುಲಸೂರಿನ ಲಾರಿ ಚಾಲಕ ರವೀಂದ್ರ ಹಾಗೂ ಬಸವಕಲ್ಯಾಣದ ಲಾರಿ ಮಾಲೀಕನ ಪುತ್ರ ಪ್ರಜ್ವಲ್ ಬಂಧಿತ ಆರೋಪಿಗಳು.

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ ಮದ್ಯದ ತಯಾರಿಕೆ ಕಂಪನಿಗೆ ಸೇರಿದ 1,100 ಮದ್ಯದ ಪೆಟ್ಟಿಗೆಗಳಿದ್ದ ಲಾರಿ ಫರಹತಾಬಾದ್‌ ಸಮೀಪ ಉರುಳಿ ಬಿದ್ದಿತ್ತು. ಅಪಘಾತ ಸ್ಥಳದಿಂದ ಸುಮಾರು 603 ಪೆಟ್ಟಿಗೆಗಳು ಕಳುವಾಗಿದ್ದಾಗಿ ಲಾರಿ ಮಾಲೀಕ ಸಂಚಾರ ಪೊಲೀಸ್ ಠಾಣೆ–1ರಲ್ಲಿ ದೂರು ನೀಡಿದ್ದರು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಟ್ರಾನ್ಸ್‌ಪೋರ್ಟ್‌ನ ಶಾಖಾ ಮ್ಯಾನೇಜರ್ ಫರಹತಾಬಾದ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದರು.

ADVERTISEMENT

ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿ, ಚಾಲಕ ಹಾಗೂ ಮಾಲೀಕ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಕಳುವಾದ ಸುಮಾರು 603 ಮದ್ಯದ ಪೆಟ್ಟಿಗೆಗಳ ಪೈಕಿ ₹ 25 ಲಕ್ಷ ಮೌಲ್ಯದ 246 ಪೆಟ್ಟಿಗೆಗಳನ್ನು ಹುಮನಾಬಾದ್‌ ತಾಲ್ಲೂಕಿನ ಜಲಸಂಗಿಯ ಗ್ರಾಮದ ಜಮೀನಿನ ಶೆಡ್‌ನಲ್ಲಿ ಇರಿಸಲಾಗಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಪೆಟ್ಟಿಗೆಗಳು ಹಾಗೂ ಕೃತ್ಯದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡ ಪ್ರಜ್ವಲ್‌ ಸ್ನೇಹಿತರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪಿಎಸ್‌ಐ ಮಲ್ಲಿಕಾರ್ಜುನ ಇಕ್ಕಳಕಿ, ಹೆಡ್‌ಕಾನ್‌ಸ್ಟೆಬಲ್‌ ಗಡ್ಡೆಪ್ಪ, ಕಾನ್‌ಸ್ಟೆಬಲ್‌ ಕಲ್ಯಾಣಿ ಅವರಿದ್ದ ತಂಡ ಆರೋಪಗಳನ್ನು ಬಂಧಿಸಿದೆ.

ಆರ್ಕಿಟೆಕ್ಟ್ ಎಂಜಿನಿಯರ್‌ಗೆ ₹ 22 ಲಕ್ಷ ವಂಚನೆ: ಸಾಮಾಜಿಕ ಜಾಲತಾಣದಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಲೈಕ್‌ ಮತ್ತು ಶೇರ್ ಮಾಡಿದರೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ, ನಗರದ ಆರ್ಕಿಟೆಕ್ಟ್ ಎಂಜಿನಿಯರ್‌ಗೆ ₹ 22 ಲಕ್ಷ ವಂಚಿಸಲಾಗಿದೆ.

ಆರ್ಕಿಟೆಕ್ಟ್ ಎಂಜಿನಿಯರ್‌ ಶೇಖ್ ಮೊಹಮದ್ ಫೈಸ್ ನೀಡಿದ ದೂರಿನ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ರವೀಂದ್ರ
ಬೀದರ್ ಜಿಲ್ಲೆಯ ಹುಮನಾಬಾದ್ ಹುಮನಾಬಾದ್‌ ತಾಲ್ಲೂಕಿನ ಜಲಸಂಗಿಯ ಗ್ರಾಮದ ಜಮೀನಿನ ಶೆಡ್‌ನಲ್ಲಿ ಇರಿಸಲಾದ ಮದ್ಯದ ಬಾಕ್ಸ್‌ಗಳು

ವಿಷ ಕುಡಿದು ಆತ್ಮಹತ್ಯೆ ಹೊಟ್ಟೆ ನೋವು ತಾಳಲಾರದೆ ವಿಷಕುಡಿದು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪಿಯು ವಿದ್ಯಾರ್ಥಿನಿ ನಿಶಾ (17) ಮೃತರು. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಮಕೂರಿನ ಕಾಲೇಜಿನಲ್ಲಿ ಓದುತ್ತಿದ್ದ ನಿಶಾ ಎರಡ್ಮೂರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ವೈದ್ಯರಿಗೆ ತೋರಿಸಿದರೂ ನೋವು ಶಮನವಾಗಲಿಲ್ಲ. ಬೇಸಿಗೆ ರಜೆಯಲ್ಲಿ ಮನೆಗೆ ಬಂದಿದ್ದ ವಿದ್ಯಾರ್ಥಿನಿ ನೋವು ಸಹಿಸಿಕೊಳ್ಳಲು ಆಗದೆ ಜೂನ್ 16ರ ಮಧ್ಯಾಹ್ನ ವಿಷ ಕುಡಿದಳು. ವಾಂತಿ ಮಾಡಿಕೊಂಡು ಒದ್ದಾಡುವುದನ್ನು ನೋಡಿದ ಪೋಷಕರಿಗೆ ವಿಷ ಕುಡಿದಿದ್ದು ಗಮನಕ್ಕೆ ಬಂತು. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.