ಕಲಬುರಗಿ: ಕಲಬುರಗಿ ಲೋಕಸಭಾ ಚುನಾವಣೆ ಎಸ್ಸಿ ಮೀಸಲು ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಹುಚ್ಚಪ್ಪ ಬಸಪ್ಪ ಅವರು ನಾಮಪತ್ರ ಸಲ್ಲಿಸಲು ಗುರುವಾರ ಆನೆ ಏರಿ ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದರು. ಅಂದ ಹಾಗೆ ಅದು ನೈಜ ಆನೆಯಲ್ಲ. ಬದಲಿಗೆ ಕೃತಕ ಆನೆ!
ಕೃತಕವಾಗಿ ನಿರ್ಮಿಸಿದ ಆನೆಯನ್ನು ಸಣ್ಣ ಟ್ರಕ್ ಮೇಲೆ ಇರಿಸಲಾಗಿತ್ತು. ಅದರ ಮೇಲೆ ಕುಳಿತ ಹುಚ್ಚಪ್ಪ ಅವರು ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತೆರಳಿದರು. ಚುನಾವಣಾ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ತಮ್ಮ ಬೆಂಬಲಿಗರೊಂದಿಗೆ ಉಮೇದುವಾರಿಕೆ ಪ್ರತಿ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಕೃತಕ ಆನೆಯ ಮೇಲೆ ಸವಾರಿ ಮಾಡಿದರು. ಮಾರ್ಗದ ಉದ್ದಕ್ಕೂ ಪಕ್ಷದ ಬಾವುಟ ಹಿಡಿದು ಪ್ರದರ್ಶಿದರು. ಡಿ.ಸಿ. ಕಚೇರಿ ಮುಂಭಾಗದಲ್ಲಿ ಆನೆಯಿಂದ ಕೆಳಗೆ ಇಳಯುವಂತೆ ಬೆಂಬಲಿಗರು ಹೇಳಿದರು. ಅವರ ಮಾತನ್ನು ಕೇಳದೆ ಆನೆ ಮೇಲೆ ಕುಳಿತೇ ಕಚೇರಿ ಪ್ರವೇಶ ಮಾಡುವುದಾಗಿ ಹೇಳಿ, ಒಳ ಹೋದರು.
ಬಿರು ಬಿಸಿಲು ಲೆಕ್ಕಿಸದೆ ಪಕ್ಷದ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು, ತಮಟೆ ನಾದಕ್ಕೆ ಕುಣಿಯುತ್ತಾ ಬಂದರು. ಮಾರ್ಗದ ಉದ್ದಕ್ಕೂ ಪಕ್ಷದ ಘೋಷಣೆಗಳು ಮೊಳಗಿದವು.
ಆಸ್ತಿ ವಿವರ: ಹುಚ್ಚಪ್ಪ ಅವರ ಬಳಿ ₹ 8 ಲಕ್ಷ ನಗದು ಸೇರಿ ₹9.55 ಲಕ್ಷ ಹಾಗೂ ಪತ್ನಿ ಬಳಿ ₹1.50 ಲಕ್ಷ ಚರಾಸ್ತಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.