ADVERTISEMENT

ಕಲಬುರಗಿ | ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 14:30 IST
Last Updated 1 ಜುಲೈ 2024, 14:30 IST
   

ಕಲಬುರಗಿ: ತಂಗಿ ಪತಿಯನ್ನು(ಭಾವ) ಕೊಲೆಗೈದ ಇಬ್ಬರು ಸಹೋದರರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹2 ಲಕ್ಷ ದಂಡ ವಿಧಿಸಿ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮೊಹಮ್ಮದ್ ಮುಜೀರ್‌ ಉಲ್ಲಾ ಸಿ.ಜಿ. ಆದೇಶಿಸಿದ್ದಾರೆ.

ಕಲಬುರಗಿಯ ಬಿದ್ದಾಪುರ ಕಾಲೊನಿ ನಿವಾಸಿಗಳಾದ ಶಿವಶಾಂತ ಲಕ್ಷ್ಮಣಗೌಡ ಮೂಲಗೆ ಹಾಗೂ ಪ್ರಶಾಂತ ಲಕ್ಷ್ಮಣಗೌಡ ಮೂಲಗೆ ಶಿಕ್ಷೆಗೆ ಒಳಗಾದವರು.

2022ರ ಅಕ್ಟೋಬರ್‌ 5ರಂದು ದಸರಾ ಹಬ್ಬದ ಅಂಗವಾಗಿ ಲಕ್ಷ್ಮಿಪುತ್ರ ಜಮಜೇನವರ ಅವರು ಪತ್ನಿ ಸಮೇತ ತಮ್ಮ ಸಂಬಂಧಿಕರಾದ ವಸಂತ ನಗರದ ಅಣ್ಣಾರಾವ ಅವಧೆ ಅವರ ಮನೆಗೆ ಬನ್ನಿ ಕೊಡಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಅಪರಾಧಿಗಳು, ದುಡ್ಡಿನ ವಿಷಯವಾಗಿ ಜಗಳವಾಡಿದ್ದರು. ಬಳಿಕ ಎಳನೀರು ಕೊಚ್ಚುವ ಮಚ್ಚಿನಿಂದ ಲಕ್ಷ್ಮಿಪುತ್ರ ಅವರಿಗೆ ಹೊಡೆದು ಕೊಲೆ ಮಾಡಿದ್ದರು.

ADVERTISEMENT

ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಂಡಿತ ಸಗರ ಆರೋಪಿಗಳ ವಿರುದ್ಧ ಐಪಿಸಿ ಕಲಂ 34, 302ರ ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಪರಾಧಿಗಳಿಂದ ಸಂಗ್ರಹಿಸಿದ ದಂಡದಲ್ಲಿ ಲಕ್ಷ್ಮಿಪುತ್ರ ಜಮಜೇನವರ ಅವರ ಪತ್ನಿಗೆ ₹3.80 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ.

ಅಶೋಕನಗರ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ದಾನಪ್ಪ ಹಾಗೂ ಕಾನ್‌ಸ್ಟೆಬಲ್‌ ಸುಧಾಕರ ಪ್ರಕರಣದ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.