ADVERTISEMENT

ಕಲಬುರಗಿ: ಎಲ್ಲೆಡೆ ಮಣ್ಣೆತ್ತಿನ ಹಬ್ಬ ಆಚರಣೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:06 IST
Last Updated 5 ಜುಲೈ 2024, 16:06 IST
ಅಫಜಲಪುರ ಪಟ್ಟಣದಲ್ಲಿ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆಯ ಪ್ರಯುಕ್ತ ಪಿಒಪಿ ಎತ್ತುಗಳನ್ನು ಮಹಿಳೆಯರು ಖರೀದಿಸಿದರು
ಅಫಜಲಪುರ ಪಟ್ಟಣದಲ್ಲಿ ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆಯ ಪ್ರಯುಕ್ತ ಪಿಒಪಿ ಎತ್ತುಗಳನ್ನು ಮಹಿಳೆಯರು ಖರೀದಿಸಿದರು   

ಕಲಬುರಗಿ: ನಗರ ಸೇರಿ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಮಣ್ಣು ಎತ್ತುಗಳು ತಂದು ಪೂಜೆ ಮಾಡಿ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಿದರು.

ನಗರದಲ್ಲಿ ಗುರುವಾರದಿಂದಲೇ ಮಣ್ಣು ಹಾಗೂ ಪಿಒಪಿಯಿಂದ ಮಾಡಲಾದ ಎತ್ತುಗಳನ್ನು ಖರೀದಿಸಿ ಪೂಜೆ ಶುಕ್ರವಾರ ಪೂಜೆ ಸಲ್ಲಿಸಿ ಭಕ್ತಿ ಮೆರೆದರೆ, ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಿಗ್ಗೆ ಜಮೀನುಗಳಿಗೆ ತೆರಳಿ ಶುದ್ಧ ಮಣ್ಣು ತಂದು ಎತ್ತುಗಳನ್ನು ತಯಾರಿಸಿ ಜಗಲಿ ಮೇಲೆ ಇಟ್ಟು ವಿಶೇಷ ನೈವೇದ್ಯ ಸಮರ್ಪಿಸಿ, ದೀಪ ಬೆಳಗಿಸುವ ಮೂಲಕ ಪೂಜೆ ಸಲ್ಲಿಸಿದರು.

ಗುರುವಾರದಿಂದಲೇ ನಗರದ ಕುಂಬಾರ ಓಣಿ ಹಾಗೂ ಇತರೆ ಅಂಗಡಿಗಳಲ್ಲಿ ಮಣ್ಣಿನ ಎತ್ತುಗಳ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ನಗರದ ಜನರು ಖರೀದಿಸಿ ಮನೆ ತಂದರು. ಪೂಜೆ ಸಲ್ಲಿಸಿದ ನಂತರ ಚಿಕ್ಕ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಸಂಜೆ ಮೆರವಣಿಗೆ ಮಾಡುವುದು ಹಳ್ಳಿಗಳಲ್ಲಿ ಕಂಡು ಬಂತು.

ADVERTISEMENT

ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ: ಉತ್ತರ ಕರ್ನಾಟಕ ವಿಶೇಷ ಹಬ್ಬವೆನಿಸಿರುವ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಕೃಷಿ ಚಟುವಟಿಕೆಯಲ್ಲಿ ಎತ್ತುಗಳಿಗೆ ಮೊದಲ ಪ್ರಾಧಾನ್ಯ ಇದೆ. ಮಣ್ಣಿನಿಂದ ಮಾಡಿದ ಎತ್ತಿನ ವಿವಿಧ ಆಕೃತಿಗಳನ್ನು ಮನೆ ಜಗಲಿಯ ಮೇಲೆ ಇಟ್ಟು ಪೂಜೆ ಜತೆಗೆ ಅನ್ನ ಪ್ರಸಾದ ಪಡೆಯುವುದು ಮಣ್ಣೆತ್ತಿನ ಅಮಾವಾಸ್ಯೆ. ಕಾರಹುಣ್ಣಿಮೆಯಲ್ಲಿ ಎತ್ತುಗಳನ್ನು ಪೂಜಿಸಿದರೆ, ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನ ಎತ್ತುಗಳಿಗೆ ಪೂಜಿಸಿ ಸಂಭ್ರಮ ಪಡುವ ಹಬ್ಬವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.