ವಾಡಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಬಲಿಷ್ಟಗೊಳಿಸಲು ಸದಸ್ಯತ್ವ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಮಾತ್ರ ಹಿಂದುಳಿದಿಲ್ಲ. ಇಲ್ಲಿನ ಇತರ ಹಿಂದುಳಿದ ವರ್ಗದಲ್ಲಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ವರ್ಗ ತೀರಾ ಹಿಂದುಳಿಯಲು ಇಲ್ಲಿನ ಜನಪ್ರತಿನಿಧಿಗಳೇ ಪ್ರಮುಖ ಕಾರಣರಾಗಿದ್ದಾರೆ’ ಎಂದು ಹೇಳಿದರು.
‘ಹಲವು ಸಮಸ್ಯೆಗಳ ನಡುವೆಯೂ ಹಿಂದೆ ಸರಿಯದೇ ಎದೆಕೊಟ್ಟು ಕೆಲಸ ಮಾಡುವ ಕಾರ್ಯಕರ್ತರು ಚಿತ್ತಾಪುರ ಕ್ಷೇತ್ರದಲ್ಲಿದ್ದಾರೆ. ಆದರೆ, ನಿಮಗೊಬ್ಬ ನಾಯಕ ಇಲ್ಲ ಎಂಬ ಕೊರಗು ಕಾಡುತ್ತಿದೆ. ಆ ನಾಯಕನನ್ನು ಸೃಷ್ಟಿಸುವ ಕೆಲಸ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಾವು ಮಾಡುತ್ತೇವೆ. ಸದ್ಯದ ಕಾಂಗ್ರೆಸ್ ಸರ್ಕಾರ ಸ್ಥಿರವಿಲ್ಲ. ಹೀಗಾಗಿ ಸರ್ಕಾರ ಯಾವುದೇ ಕ್ಷಣದಲ್ಲಿ ಪತನವಾಗಬಹುದು. ಹೀಗಾಗಿ ಮುಂದಿನ ವರ್ಷ ಚುನಾವಣೆ ನಡೆಯಬಹುದು. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಬೇಕು’ ಎಂದು ಕಾರ್ಯಕರ್ತರಿಗೆ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟ ಸಭೆ ಕಲಬುರಗಿಯಲ್ಲಿ ಆಯೋಜಿಸಿದ್ದು ದೊಡ್ಡಮಟ್ಟದ ಅಭಿವೃದ್ಧಿಯ ಕನಸು ಬಿತ್ತುತ್ತಿದ್ದಾರೆ. ಆದರೆ ಇದೆಲ್ಲ ನಾಟಕದ ಒಂದು ಭಾಗ’ ಎಂದು ಹೇಳಿದರು.
ಬಿಜೆಪಿ ಎಸ್ಸಿ ಮೋರ್ಚಾದ ತಾಲ್ಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ಮಾತನಾಡಿ, ‘ಕೆಲವರು ಚುನಾವಣೆ ಬಂದಾಗ ನೇರವಾಗಿ ಬಂದು ಟಿಕೆಟ್ ಕೇಳುತ್ತಾರೆ. ಆದರೆ, ಸದಸ್ಯತ್ವ ಅಭಿಯಾನ ಮಾತ್ರ ಸಾಮಾನ್ಯ ಕಾರ್ಯಕರ್ತರ ಕೊರಳಿಗೆ ಹಾಕುತ್ತಾರೆ. ಹೀಗಾಗಿ ಚಿತ್ತಾಪುರ ಕ್ಷೇತ್ರ ವಾರಸುದಾರರಿಲ್ಲದೇ ಅನಾಥವಾಗಿದೆ’ ಎಂದು ಹೇಳಿದರು.
ಶಿವರಾಜ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ, ತಾಲ್ಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮಹಿಳಾ ಘಟಕದ ತಾಜೂಕು ಅಧ್ಯಕ್ಷೆ ನಾಗುಬಾಯಿ, ಮುಖಂಡರಾದ ಬಸವರಾಜ ಪಂಚಾಳ, ವಿಠ್ಠಲ ನಾಯಕ, ಆನಂದ ಇಂಗಳಗಿ, ದೌಲತರಾವ ಚಿತ್ತಾಪುರಕರ, ಭಾಗಣ್ಣ ದೊರಿ, ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ, ಗಿರಿಮಲ್ಲಪ್ಪ ಕಟ್ಟಿಮನಿ, ಕಿಶನ ನಾಯಕ ಇತರರಿದ್ದರು. ಬಿಜೆಪಿ ಸ್ಥಳೀಯ ಅಧ್ಯಕ್ಷ ವೀರಣ್ಣ ಯಾರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.