ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಒಂಬತ್ತು ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಮಂಗಳವಾರ ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಬೆಂಗಳೂರಿನ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ಈ ಕೈದಿಗಳು 14 ವರ್ಷ ಜೀವಾವಧಿ ಶಿಕ್ಷೆಯನ್ನು ಅನುಭವಿಸಿದ್ದರು. ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿನ 9 ಕೈದಿಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಕಾರ್ಯಕ್ರಮದ ಬಳಿಕ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಅವರು ಶಿಕ್ಷೆಯ ಅವಧಿಯಲ್ಲಿ ಮಾಡಿದ ಕೆಲಸದ ಕೂಲಿ ಹಣ ಮತ್ತು ಇತರ ಸಾಮಗ್ರಿಗಳನ್ನು ಅವರಿಗೆ ಹಸ್ತಾಂತರಿಸಲಾಯಿತು ಎಂದು ಕೈದಿಗಳೊಂದಿಗೆ ಬೆಂಗಳೂರಿಗೆ ತೆರಳಿರುವ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ರಂಗನಾಥ್ ಮಾಹಿತಿ ನೀಡಿದರು.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮಂಟಾಳ ಗ್ರಾಮದ ಬಸವರಾಜ ಶಿವಪ್ಪನೊರೆ, ಅಫಜಲಪುರ ತಾಲ್ಲೂಕಿನ ಹೊಸೂರ ಹಳ್ಳಿಯ ವಜೀರಸಾಬ್ ಮರತೂರ, ರಾಯಚೂರು ಜಿಲ್ಲೆ ಹಳೆ ಜದಲದಿನ್ನಿಯ ಲಚಮಯ್ಯ ಭೀಮಶಪ್ಪ, ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದ ದತ್ತಯ್ಯ ಕಲಾಲ್, ಮಾಣಿಕ ಕಲಾಲ್, ಬಸಯ್ಯ ಕಲಾಲ್, ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ತೋಪಗಲ್ಲಿಯ ಮೊಹಮ್ಮದ್ ನಜೀಬ್ ಹಸನ್, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಲಂಗಿ ಗೋಮಾಳದ ಚಂದ್ರ ಕುಮಾರಸ್ವಾಮಿ, ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಯಡ್ಡಲದೊಡ್ಡಿ ತಾಂಡಾದ ಹನಮಂತ ಭೀಮಲ್ಯಾ ಬಿಡುಗಡೆಯಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.