ಕಲಬುರಗಿ: ‘ನಾರಾಯಣಪುರ ಜಲಾಶಯದಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್ಎಫ್) ಯನ್ನು ವಾಪಸ್ ಪಡೆಯುವ ಆದೇಶವನ್ನು ಹಿಂಪಡೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ನಾರಾಯಣಪುರ ಸೇರಿ ಮೈಸೂರು ಭಾಗದ ಜಲಾಶಯಗಳಿಗೆ ಒದಗಿಸಲಾಗಿದ್ದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಭದ್ರತೆ ಹಿಂಪಡೆಯುವಂತೆ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಬಳಿಕ ಮೈಸೂರು ಭಾಗದ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಆ ಭಾಗದ ಜಲಾಶಯಗಳಿಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆದಿದ್ದಾರೆ. ಆದರೆ, ನಾರಾಯಣಪುರ ಜಲಾಶಯಕ್ಕೆ ಸಂಬಂಧಿಸಿದ ಆದೇಶವನ್ನು ಹಿಂಪಡೆದಿಲ್ಲ. ಇದು ತಾರತಮ್ಯದ ಕ್ರಮವಾಗಿದೆ. ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರ ಹೊಂದಿದ ಧೋರಣೆಯನ್ನು ಸೂಚಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾರಾಯಣಪುರ ಜಲಾಶಯ 33 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದು ರಾಯಚೂರು, ಯಾದಗಿರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ರಾಯಚೂರು ಜಿಲ್ಲೆಯು ಆಂಧ್ರಪ್ರದೇಶ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿದ್ದು, ಅಲ್ಲಿ ನಕ್ಸಲ್ ಪ್ರಭಾವ ಇದೆ. ರೈತರ ಪ್ರತಿಭಟನೆಗಳೂ ನಡೆಯುತ್ತವೆ. ಆದ್ದರಿಂದ ಕೆಎಸ್ಐಎಸ್ಎಫ್ ಭದ್ರತೆ ಒದಗಿಸುವುದು ಸೂಕ್ತ. ಭದ್ರತೆ ವಾಪಸ್ ಪಡೆಯುವುದರಿಂದ ಭದ್ರತಾ ಪಡೆಯಲ್ಲಿರುವ ಈ ಭಾಗದವರಿಗೆ ಸ್ಥಳ ನಿಯೋಜನೆ ಹಾಗೂ ಮುಂಬಡ್ತಿಯಲ್ಲಿ ಅನ್ಯಾಯವಾಗಲಿದೆ. ಆದ್ದರಿಂದ ಜಲಾಶಯಕ್ಕೆ ಕೆಎಸ್ಐಎಸ್ಎಫ್ ಭದ್ರತೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.