ಕಲಬುರಗಿ: ನಗರದ ಜಿಡಿಎ ಲೇಔಟ್ನ ಸ್ಲಂಬೋರ್ಡ್ ಕಾಲೊನಿಗೆ ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆಯ ಮುಖಂಡರು ಮಹಾನಗರ ಪಾಲಿಕೆಯ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.
ವಾರ್ಡ್ ನಂಬರ್ 33ರಲ್ಲಿನ ಸ್ಲಂಬೋರ್ಡ್ ಕಾಲೊನಿಯಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಸುಮಾರು 52 ಮನೆಗಳಿವೆ. ಕಾಲೊನಿಯಲ್ಲಿ ಯಾವುದೇ ರೀತಿಯ ಶೌಚಾಲಯ ಹಾಗೂ ಚರಂಡಿ ವ್ಯವಸ್ಥೆ ಇಲ್ಲ. ಮಹಿಳೆಯರು, ಮಕ್ಕಳು ಶೌಚಾಲಯಕ್ಕೆ ಹೊರಗಡೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.
ವಾರದ ಒಳಗೆ ಕಾಲೊನಿಯಲ್ಲಿ ಚರಂಡಿ ಹಾಗೂ ಕುಡಿಯುವ ನೀರಿನಂತಹ ಮೂಲಸೌಕರ್ಯ ವ್ಯವಸ್ಥೆ ಮಾಡದೆ ಇದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂ, ಉಪಾಧ್ಯಕ್ಷ ಧರ್ಮರಾಜ ಶಹಾಪೂರಕರ್, ಪ್ರಮುಖರಾದ ಅರುಣ ಆರ್. ಗಾಜರೆ, ವಿಶ್ವನಾಥ ದೆಕ್ಕನ್, ಪಾತಿಮ್ಮಾ ಆರ್., ಜಗದೀಶ ಬಿಲಗುಂದಿ, ಜಮಿರ ಖಾನ್, ಮುಸ್ತಾಫ್, ಪರಶುರಾಮ, ಅಶೋಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.