ಶಹಾಬಾದ್: ‘ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಪಟ್ಟಣದ ಜನರು, ವಿಚಾರವಂತರು ನಿರಂತರವಾಗಿ ಹೋರಾಟ ಮಾಡಿ ಸಚಿವರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯ ಹೆದ್ದಾರಿ 150ರಲ್ಲಿ ಆಳವಾಗಿ ಬಿದ್ದ ತಗ್ಗುಗಳ ಮಧ್ಯೆ ಸಸಿ ನೆಟ್ಟು ಮಾತನಾಡಿದರು.
‘ಈ ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬರು ಸಂಬಂಧಿಸಿದವರಿಗೆ ಶಾಪ ಹಾಕುತ್ತಾರೆ. ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಬಸವರಾಜ ಮತ್ತಿಮಡು, ನಗರಸಭೆ ಅಧಿಕಾರಿಗಳು, ಪಿಡಬ್ಲ್ಯೂಡಿ ಅಧಿಕಾರಿಗಳು, ಎಇಇ ಅವರು ರಸ್ತೆ ನಿರ್ಮಾಣ ಮಾಡಿದೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜ್ಯ ಹೆದ್ದಾರಿ ಮಧ್ಯೆ ಸಸಿಗಳನ್ನು ನೆಟ್ಟಿದ್ದೆವೆ, ಸಚಿವರು, ಶಾಸಕರು, ಅಧಿಕಾರಿಗಳು ನೀರು ಹಾಕು ಸಸಿಗಳನ್ನು ಬೆಳೆಸಿ ಪರಿಸರವನ್ನು ಉಳಿಸವ ಕೆಲಸವಾದರೂ ಮಾಡಲಿ’ ಎಂದು ವ್ಯಂಗ್ಯ ಮಾಡಿದರು.
‘ಶ್ರೀಘ್ರದಲ್ಲಿ ತಾತ್ಕಾಲಿಕವಾದರೂ ರಸ್ತೆ ದುರಸ್ತಿ ಮಾಡಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಶಹಾಬಾದ್ ಬಂದ್ ಮಾಡುವಂತಹ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಎಸ್ಯುಸಿಐ ಕಾರ್ಯದರ್ಶಿ ಗಣಪತರಾವ. ಕೆ ಮಾನೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಝಹೀರ್ ಅಹಮದ್ ಪಟವೇಕರ್, ಗುಂಡಮ್ಮ ಮಡಿವಾಳ, ಮಲ್ಲಿಕಾರ್ಜುನ ಪೋಲಿಸ್ ಪಾಟೀಲ ನಡುವಿನಹಳ್ಳಿ, ಮಲ್ಲಣ್ಣ ಮಸ್ಕಿ, ಮಲ್ಲಣ್ಣ ಮರತೂರ, ಕಳ್ಳೋಳಿ ಕುಸಾಳೆ, ಶ್ರೀನಿವಾಸ ದಂಡಗುಲ್ಕರ, ಮಹೀಬುಬ್ ಮದ್ರಿ, ರಾಧಿಕಾ ಚೌಧರಿ, ಮಹಮದ ಮಸ್ತಾನ, ನರಸಿಂಹಲು ರೈಚೂರಕರ, ಯಲ್ಲಾಪ್ಪ ಬೊಂಬಾಯಿ, ರಾಜೇಂದ್ರ ಅತನೂರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.