ವಾಡಿ: ಪಟ್ಟಣ ಸಮೀಪದ ಹಲಕರ್ಟಿಯ ಸಿದ್ಧೇಶ್ವರ ಧ್ಯಾನಧಾಮದ ರಾಜಶೇಖರ ಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವ ಏ.19ರಂದು ಏರ್ಪಡಿಸಲಾಗಿದೆ.
ರಂಭಾಪುರಿಯ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಮಹೋತ್ಸವ ನಡೆಯಲಿದೆ. ಇದಕ್ಕೂ ಮೊದಲು ಏ.18ರಂದು ಸಂಜೆ 5ಗಂಟೆಗೆ ರಂಭಾಪುರಿ ಶ್ರೀಗಳು ಅಡ್ಡಪಲ್ಲಕಿ ಉತ್ಸವದ ಮೂಲಕ ಪುರಪ್ರವೇಶ ಮಾಡಲಿದ್ದಾರೆ. ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನದ ಶಿಖರಕ್ಕೆ ಕಳಸಾರೋಹಣ, ರಾಜಶೇಖರ ಸ್ವಾಮಿಗಳ ತುಲಾಭಾರ ನೆರವೇರಲಿದೆ.
‘ಏ.9ರಿಂದ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಆರಂಭಗೊಂಡಿದ್ದು 9 ದಿನಗಳ ಕಾಲ ಜರುಗಲಿದೆ. ಸಿದ್ಧೇಶ್ವರ ದೇವಸ್ಥಾನ ಪರಿಸರದಲ್ಲಿ ದೇವಿಯ ಪೂಜೆ ಮಾಡಿಕೊಂಡು ಬರುವ ಮೂಲಕ ಇದನ್ನು ಸಿದ್ಧೇಶ್ವರ ಧ್ಯಾನಧಾಮ ಎಂದು ಪರಿವರ್ತಿಸಿದ್ದೇವೆ. ಇನ್ನು ಮುಂದೆ ಈ ಧ್ಯಾನಧಾಮವು ರಂಭಾಪುರಿ ಪೀಠದ ಶಾಖಾ ಮಠವಾಗಿ ಬದಲಾಗಲಿದೆ. ಪಟ್ಟಾಧಿಕಾರ ಮಹೋತ್ಸವದ ಬಳಿಕ ಶ್ರೀಮಠವು ಮತ್ತಷ್ಟು ಧಾರ್ಮಿಕ ಕಾರ್ಯಗಳ ಸೇವೆಯಲ್ಲಿ ತೊಡಗಲಿದೆ. ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಲಿದ್ದಾರೆ’ ಎಂದು ರಾಜಶೇಖರ ಸ್ವಾಮೀಜಿ ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.