ADVERTISEMENT

ಮರಳು ಅಕ್ರಮ: ಆರು ಆರೋಪಿಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 6:24 IST
Last Updated 2 ಜೂನ್ 2024, 6:24 IST

ಕಲಬುರಗಿ: ಅಫಜಲಪುರ ತಾಲ್ಲೂಕಿನ ಭೀಮಾ ನದಿ ದಡದ ಮೇಲಿನ ಮರಳು ಕದ್ದು ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮಾಡಿ, ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಅಕ್ರಮವಾಗಿ ಮರಳು ಸಂಗ್ರಹಿಸಿದ ಆರೋಪದಲ್ಲಿ ಮಣ್ಣೂರು ಮತ್ತು ಕೂಡಿಗನೂರ ಗ್ರಾಮದ ಆರು ಮಂದಿ ವಿರುದ್ಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣ್ಣೂರು ಗ್ರಾಮದ ಮಹಾಂತೇಶ ಗುರುಬಾಳ ಅವರು ಜಮೀನಿನಲ್ಲಿ 120 ಟ್ರ್ಯಾಕ್ಟರ್‌ನ ₹ 2.40 ಲಕ್ಷ ಹಾಗೂ ಹಣಮಂತ ನಾನಾ ಬದನಿಕಾಯಿ ಜಮೀನಿನಲ್ಲಿ 30 ಟ್ರ್ಯಾಕ್ಟರ್‌ನ ₹ 60 ಸಾವಿರ ಮೌಲ್ಯದಷ್ಟು ಮರಳು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೂಡಿಗನೂರ ಗ್ರಾಮದ ಶಂಕರ ಗೋಪಾಲ, ಕುಪೇಂದ್ರ ಗೋಪಾಲ ಮತ್ತು ಸಂತೋಷ ಗೋಪಾಲ ಹಾಗೂ ಶಿವಬಸಪ್ಪ ಶಂಕರಪ್ಪ ಅವರ ಜಮೀನಿನಲ್ಲಿ ತಲಾ 20 ಟ್ರ್ಯಾಕ್ಟರ್‌ನ ಒಟ್ಟು ₹ 80 ಸಾವಿರ ಮೌಲ್ಯದ ಮರಳು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.

4 ಜಾನುವಾರು ರಕ್ಷಣೆ: ಕಾಳಗಿ ತಾಲ್ಲೂಕಿನ ಕಂದಗೋಳ ಕ್ರಾಸ್ ಸಮೀಪ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಸರಕು ವಾಹನವನ್ನು ವಶಕ್ಕೆ ಪಡೆದ ಕಾಳಗಿ ಠಾಣೆಯ ಪೊಲೀಸರು, 4 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಆರೋಪದಲ್ಲಿ ಬೆಡಸೂರ ನಿವಾಸಿ ಹುಸೇನ್ ಪಟೇಲ್ ಮತ್ತು ಅಬ್ದುಲ್ ರಜಾಕ್ ಅವರನ್ನು ಬಂಧಿಸಲಾಗಿದೆ.

ರಾತ್ರಿ ಗಸ್ತಿನಲ್ಲಿ ಇದ್ದ ಹೆಡ್‌ ಕಾನ್‌ಸ್ಟೆಬಲ್ ರೇವಣಸಿದ್ದಪ್ಪ ಮತ್ತು ಕಾನ್‌ಸ್ಟೆಬಲ್‌ ಶ್ರೀನಾಥ ಅವರು, ಕಂದಗೋಳ ಕ್ರಾಸ್ ಸಮೀಪ ಸರಕು ವಾಹನ ತಡೆದರು. ಆರೋಪಿಗಳು ವಾಹನದಲ್ಲಿನ ನಾಲ್ಕು ಜಾನುವಾರುಗಳ ಕಾಲು ಮತ್ತು ಬಾಯಿಗೆ ಹಗ್ಗು ಕಟ್ಟಿ ಬೀದರ್‌ನ ಬಸವಕಲ್ಯಾಣದ ಸಂತೆಗೆ ಸಾಗಿಸುತ್ತಿರುವುದಾಗಿ ಹೇಳಿದರು. ಆದರೆ, ಅವರ ಬಳಿ ಸೂಕ್ತ ದಾಖಲಾತಿಗಳು ಇರಲಿಲ್ಲ. ಹೀಗಾಗಿ, ವಾಹನ ಮತ್ತು ₹ 61 ಸಾವಿರ ಮೌಲ್ಯದ ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.