ADVERTISEMENT

ಕಲಬುರಗಿ: ರಾಯಣ್ಣನ ಪ್ರತಿಮೆಯ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 4:08 IST
Last Updated 16 ಆಗಸ್ಟ್ 2024, 4:08 IST
ಕಲಬುರಗಿಯಲ್ಲಿ ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದ ಯುವಕರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದ ಯುವಕರು –ಪ್ರಜಾವಾಣಿ ಚಿತ್ರ   

ಕಲಬುರಗಿ: ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದ ಅಂಗವಾಗಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯ ಅದ್ದೂರಿ ಮೆರವಣಿಗೆ ಗುರುವಾರ ಜರುಗಿತು.

ನಗರದ ಬ್ರಹ್ಮಪುರದ ಸಮತಾ ಕಾಲೊನಿಯ ಧನಗರಗಲ್ಲಿ ಅಲಂಕೃತ ಟ್ರ್ಯಾಕ್ಟರ್‌ಗಳಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಮೂರ್ತಿಗಳನ್ನು ಇರಿಸಿ ಬೃಹತ್ ಹಾರ ಹಾಕಲಾಯಿತು. ಶಾಸಕ ಅಲ್ಲಮಪ್ರಭು ಪಾಟೀಲ ಹಾಗೂ ಹುಲಜಂತಿಯ ಮಾಳಿಂಗರಾಯ ಮಹಾರಾಜರು ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಗೆ ಚಾಲನೆ ಸಿಗುತ್ತಿದ್ದಂತೆ ಸಮುದಾಯದ ಮುಖಂಡರು, ನೂರಾರು ಯುವಕರು ರಾಯಣ್ಣನ ಜೈಕಾರ ಹಾಕಿದರು. ಕೈಯಲ್ಲಿ ಅರಿಶಿನ ಬಣ್ಣದ ರಾಯಣ್ಣನ ಭಾವಚಿತ್ರ ಇರುವ ಧ್ವಜ ಹಿಡಿದು ಮೆರವಣಿಗೆ ಉದ್ದಕ್ಕೂ ಘೋಷಣೆ ಕೂಗಿದರು.

ADVERTISEMENT

ರಾಯಣ್ಣನ ಮೂರ್ತಿಯ ಹಿಂದೆಯೇ ಆಟೊಗಳ ಮೇಲೆ ಭಾರತ ಮಾತೆ, ಬಸವಣ್ಣ, ಮಹಾತ್ಮ ಗಾಂಧಿ, ಭಗತ್‌ಸಿಂಗ್, ಸುಭಾಷ ಚಂದ್ರಬೋಸ್, ಸೇವಾಲಾಲ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಭಾವಚಿತ್ರಗಳನ್ನು ಇರಿಸಿ, ಮೆರವಣಿಗೆ ಮಾಡಲಾಯಿತು.

ಧನಗರಗಲ್ಲಿ, ಗಂಗಾನಗರ ರಸ್ತೆ, ಲಾಲಗೇರಿ ಕ್ರಾಸ್ ಮಾರ್ಗವಾಗಿ ಸಿಟಿ ಬಸ್‌ ನಿಲ್ದಾಣದ ಬಳಿ ಇರುವ ರಾಯಣ್ಣ ಮೂರ್ತಿವರೆಗೆ ಮೆರವಣಿಗೆ ಸಾಗಿತು. ಮಾರ್ಗದ ಉದ್ದಕ್ಕೂ ಯುವಕರು ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. 101 ಡೊಳ್ಳು, ಬಾಜಭಜಂತ್ರಿ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದವು.

ಮೆರವಣಿಗೆಯಲ್ಲಿ ಪ್ರದೇಶ ಕುರುಬಗೊಂಡ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥ ಪೂಜಾರಿ, ರಾಜು ಪಿ. ಪೂಜಾರಿ, ಈಶ್ವರ ಪೂಜಾರಿ, ಮುತ್ತು ಪೂಜಾರಿ, ಸಿದ್ದು ಕನಕ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಸಮುದಾಯದವರು ಸಂಭ್ರಮದಿಂದ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.