ADVERTISEMENT

ಅರಳಿ ನಿಂತ ಹತ್ತಿಗೆ ಕಾರ್ಮಿಕರ ಕೊರತೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 7:39 IST
Last Updated 25 ಡಿಸೆಂಬರ್ 2023, 7:39 IST
ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಅರಳಿ ನಿಂತ ಹತ್ತಿ
ಯಡ್ರಾಮಿ ತಾಲ್ಲೂಕಿನ ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಅರಳಿ ನಿಂತ ಹತ್ತಿ   

ಯಡ್ರಾಮಿ: ತೊಗರಿ ನಾಡು ಕಲಬುರಗಿಯಲ್ಲಿ ಈ ಬಾರಿ ಹತ್ತಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಅಲ್ಪ ಮಳೆಗೆ ಬಿತ್ತಿದ್ದ ಹತ್ತಿಗೆ ಕೆಲವೆಡೆ ಇಳುವರಿ ಕಂಡು ಬಂದಿದೆ. ಆದರೆ ಜಮೀನಿನಲ್ಲಿದ್ದ ಹತ್ತಿ ಬಿಡಿಸಿ ಮನೆಗೆ ತರಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ.

ತಾಲ್ಲೂಕಿನ ಬಳಬಟ್ಟಿ, ಶಿವಪುರ, ಹಂಗರಗಾ(ಕೆ), ವಡಗೇರಾ, ಇಜೇರಿ ಹೋಬಳಿ ಸೇರಿದಂತೆ ವಿವಿಧೆಡೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಹುಲುಸಾಗಿ ಅರಳಿ ನಿಂತಿದೆ.

ಮೊಸರು ಚೆಲ್ಲಿದ ರೀತಿಯಲ್ಲಿ ಫಲ ಕಂಗೊಳಿಸುತ್ತಿದೆ. ನೂಲು ನೆಲಕ್ಕೆ ತಾಕುವ ಮುನ್ನವೇ ಹತ್ತಿ ಬಿಡಿಸಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಿದೆ.
ಹೂ ಬಿಟ್ಟು ಕಾಯಿ ಕಟ್ಟಿ ಹತ್ತಿ ಕೈಗೆಟುಕುವ ಅನಿವಾರ್ಯ ಎದುರಾಗಿ ತಿಂಗಳು ಕಳೆದರೂ ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ADVERTISEMENT

ಮಳ್ಳಿ, ನಾಗರಹಳ್ಳಿ, ಕುಳಗೇರಾ, ವಡಗೇರಾ, ಬಿರಾಳ ಹಿಸ್ಸಾ, ಕಾಚಾಪೂರ, ದುಮ್ಮದ್ರಿ, ಸಾಥಖೇಡ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹತ್ತಿ ಬಿಡಿಸಲು ಕಾರ್ಮಿಕರ ಹುಡುಕಾಟದಲ್ಲಿ ತೊಡಗಿದ್ದಾರೆ.

ಸದ್ಯ ಕೂಲಿ ಕಾರ್ಮಿಕರಿಗೆ ₹ 250 ದಿನಗೂಲಿ ಇದೆ ಹಾಗೂ 50ಕೆಜಿಯಿಂದ 70 ಕೆಜಿವರೆಗೆ ಒಬ್ಬ ಮಹಿಳೆ ಹತ್ತಿ ಬಿಡಿಸುತ್ತಾರೆ. ಜಮೀನು ಮಾಲೀಕ ಕೆಜಿಗೆ ₹ 10 ಕೊಟ್ಟರೆ 50 ಕೆಜಿಗೆ ₹ 500 ಆಗುತ್ತದೆ ಎನ್ನುತ್ತಾರೆ ಕೃಷಿ ಕಾರ್ಮಿಕ ಮಹಿಳೆಯರು.

ಕೆಂಭಾವಿ, ಶಹಾಪೂರ ಮತ್ತು ಜೇವರ್ಗಿ ಭಾಗದಿಂದ ಟಂಟಂ ವಾಹನಗಳಲ್ಲಿ ಕೃಷಿ ಕಾರ್ಮಿಕರನ್ನು ಕರೆತರುವ ಪರಿಸ್ಥಿತಿ ಎದುರಾಗಿದೆ.
ಹತ್ತಿ ಉತ್ತಮ ಇದ್ದರೂ ಕ್ವಿಂಟಾಲ್‌ಗೆ ₹ 7000 ಗೆ ಕುಸಿತ ಕಂಡಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಳೆ ಕೈಕೊಟ್ಟಿತ್ತು. ಆದರೆ ಅಲ್ಪ ಮಳೆಗೆ ಬೆಳೆ ಬೆಳೆದಿದ್ದೇವೆ. ಅದು ಸಹ ಕೂಲಿ ಕಾರ್ಮಿಕರು ಸಿಗದೆ ಹತ್ತಿ ಕೈಗೆ ಬರದಂತಾಗಿ ಸಂಕಷ್ಟ ತಂದೊಡ್ಡಿದೆ- ಬಸಮ್ಮ ದೊಡಮನಿ ಹಂಗರಗಾ(ಕೆ) ರೈತ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.