ಕಲಬುರಗಿ: ಉಪನ್ಯಾಸಕರು ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಆಧುನಿಕತೆಗೆ ತಕ್ಕಂತೆ ಬೆಳೆಯಬೇಕಾದರೆ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಕೆಬಿಎನ್ ವಿವಿಯ ಐಕ್ಯೂಎಸಿ ನಿರ್ದೇಶಕ ಎಂ.ಎ.ಬಷೀರ್ ನುಡಿದರು.
ಕೆಬಿಎನ್ ವಿ.ವಿ.ಯ ಗ್ಯಾಲರಿ ಹಾಲ್ನಲ್ಲಿ ಎಂಜಿನಿಯರಿಂಗ್ ವಿಭಾಗ, ಗಣಕ ವಿಜ್ಞಾನ ಮತ್ತು ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ವಾರಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಎ.ವಿ. ನರಸಿಂಹದನ ಮತ್ತು ಕೆ. ನವೀನ್ ಕುಮಾರ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್. ಕಮಾಲ್ ಮೊಹಮ್ಮದ್ ಅಜಾಂ ಮಾತನಾಡಿ, ‘15 ದಿನಗಳ ಕಾಲ ನೀಡಿದ ಉಪನ್ಯಾಸಗಳು ಪ್ರಾಧ್ಯಾಪಕರ ಕೌಶಲಗಳನ್ನು ಹೆಚ್ಚಿಸಿವೆ. ಮುಂದಿನ ದಿನಗಳಲ್ಲಿ ಎಂಜಿನಿಯರಿಂಗ್ ನಿಕಾಯದಲ್ಲಿ ಮತ್ತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
ಎಲ್ಲ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅಭ್ಯರ್ಥಿಗಳಾದ ಅಸ್ಮಾ ಅಂಜುಂ, ಮಾರುಕ ಫಾತಿಮಾ, ನದೀಮ ಪಾಷಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಮೊಹಮ್ಮದ್ ನಝರುದ್ದೀನ್ ಪ್ರಾರ್ಥಿಸಿದರೆ, ನಸೀರ್ ಅಲಿ ಸ್ವಾಗತಿಸಿದರು. ವಿಶಾಲದತ್ತ ಕೊಹಿರ ವರದಿ ಸಲ್ಲಿಸಿದರು. ಪ್ರೊ. ಜೂಹರಾ ಬೇಗಂ ಪರಿಚಯಿಸಿದರು.
ಸಮೀನಾ ಬಾನು ವಂದಿಸಿದರು. ಮೊಹಮ್ಮದ್ ಯೂಸುಫ್ ನಿರೂಪಿಸಿದರು. ಎಂಜಿನಿಯರಿಂಗ್ ವಿಭಾಗದ ಎಲ್ಲ ಪ್ರಾಧ್ಯಾಪಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.