ಕಲಬುರಗಿ: ‘ಬಿಎ, ಎಂಎ ಓದಿದವರಿಗೆ ಇಂದಿನ ದಿನಗಳಲ್ಲಿ ನೌಕರಿ ಸಿಗುತ್ತಿಲ್ಲ. ಆದ್ದರಿಂದ ಕೌಶಲ ಅಭಿವೃದ್ಧಿ ಇಲಾಖೆಯಿಂದ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಕೌಶಲ ತರಬೇತಿ ಕೇಂದ್ರ ಆರಂಭಿಸಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಬೇಕು’ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಸಲಹೆ ನೀಡಿದರು.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿ (ಎಚ್ಕೆಇ)ಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ₹ 19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಕೈಗಾರಿಕಾ ಸಚಿವನಾಗಿದ್ದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಜಿಟಿಟಿಸಿ ಹಾಗೂ ಕೆಜಿಟಿಟಿಐ ಎಂಬ ತರಬೇತಿ ಸಂಸ್ಥೆಗಳನ್ನು ಜರ್ಮನಿ ಸರ್ಕಾರದ ಸಹಯೋಗದೊಂದಿಗೆ ಆರಂಭಿಸಿದ್ದೆ. ಇದರಲ್ಲಿ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಇಂದು ವಿದೇಶದಲ್ಲಿ ನೆಲೆಸಿದ್ದಾರೆ. ನಾನೊಮ್ಮೆ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದ ವೇಳೆ ಕಲಬುರಗಿಯ ವಿದ್ಯಾರ್ಥಿ ಭೇಟಿಯಾಗಿದ್ದ. ಇಷ್ಟು ದೂರ ಏಕೆ ಬಂದೆ ಎಂದಾಗ ಐಟಿಐ ಕಲಿತಿದ್ದರಿಂದ ಇಲ್ಲಿ ಬಂದು ನೆಲೆಸಿದ್ದೇನೆ ಎಂದನು. ಕೆಕೆಆರ್ಡಿಬಿಯಿಂದ ಆರ್ಥಿಕ ನೆರವನ್ನು ಪಡೆದುಕೊಂಡು ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಕೇಂದ್ರ ಆರಂಭಿಸಬೇಕು. ಅಧಿಕಾರ ಇದ್ದಾಗಲೇ ಇದೆಲ್ಲವನ್ನೂ ಮಾಡಿ ಮುಗಿಸಬೇಕು. ಜನಪರವಾಗಿರುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಚ್ಕೆಇ ಸಂಸ್ಥೆ ನೆಲೆಯೂರಲು ಅಂದು ಮುಖ್ಯಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪ ಅವರ ಔದಾರ್ಯದ ಗುಣ ಕಾರಣ. ಹಿಂದುಳಿದ ಭಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಬೇಕು ಎಂಬ ಯೋಜನೆ ರೂಪಿಸಿದ ನಿಜಲಿಂಗಪ್ಪ ಅವರು ಕಲಬುರಗಿ, ಬೆಳಗಾವಿ, ದಾವಣಗೆರೆ ಹಾಗೂ ಮೈಸೂರುಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡಿದರು. ಇದರಿಂದಾಗಿಯೇ ತಾಂತ್ರಿಕ ಶಿಕ್ಷಣ ಕಲಬುರಗಿಯಂತಹ ಹಿಂದುಳಿದ ಜಿಲ್ಲೆಯ ಜನರಿಗೂ ಸಿಗುವಂತಾಯಿತು. ಎಚ್ಕೆಇ ಸಂಸ್ಥೆಯ ಎಂಆರ್ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಓದಿರುವ ದಿನಗಳ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ. ವೈ.ಎಸ್. ರಾಜಶೇಖರರೆಡ್ಡಿ ಆಗಾಗ ನನ್ನ ಬಳಿ ಹೇಳುತ್ತಿದ್ದರು‘ ಎಂದು ಖರ್ಗೆ ಅವರು ಮೆಲುಕು ಹಾಕಿದರು.
‘ಕಲ್ಯಾಣ ಕರ್ನಾಟಕಕ್ಕೆ 371 (ಜೆ) ತರಲು ಸಾಕಷ್ಟು ಶ್ರಮ ಹಾಕಿದ್ದೇನೆ. ಅದರ ಪರಿಣಾಮವಾಗಿಯೇ 100 ವೈದ್ಯಕೀಯ ಸೀಟುಗಳ ಬದಲಾಗಿ ಇಂದು ಪ್ರತಿ ವರ್ಷ ಏಳು ಜಿಲ್ಲೆಗಳ ಮಕ್ಕಳಿಗೆ 1316 ವೈದ್ಯಕೀಯ ಸೀಟುಗಳು ಸರ್ಕಾರಿ ಕೋಟಾದಲ್ಲಿ ಸಿಗುತ್ತಿವೆ. 6902 ಎಂಜಿನಿಯರಿಂಗ್ ಸೀಟುಗಳು, 420 ದಂತ ವೈದ್ಯಕೀಯ ಸೀಟುಗಳು ಸಿಗುತ್ತಿವೆ. ಈ ಭಾಗಕ್ಕೆ 371(ಜೆ) ಬೇಡಿಕೆ ಇಟ್ಟಾಗ ಎನ್ಡಿಎ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಎಲ್.ಕೆ. ಅಡ್ವಾಣಿ ಅವರು ಆಗುವುದಿಲ್ಲ ಎಂದು ತಳ್ಳಿ ಹಾಕಿದ್ದರು. ಆದರೆ, ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿ ಅವರಿಗೆ ಮನವರಿಕೆ ಮಾಡಿಕೊಟ್ಟು ಈ ಬಗ್ಗೆ ಸಂಸತ್ತಿನಲ್ಲಿ ಅಂಗೀಕಾರಗೊಳಿಸುವಂತೆ ಮನವಿ ಮಾಡಿದ್ದೆವು‘ ಎಂದು ವಿವರಿಸಿದರು.
ಎಸ್ಎಸಿ ಕಟ್ಟಡದ ವಾಸ್ತುಶಿಲ್ಪಿಯೂ ಆದ ಎಚ್ಕೆಇ ಸೊಸೈಟಿ ನಿರ್ದೇಶಕ ಬಸವರಾಜ ಜೆ. ಖಂಡೇರಾವ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ಸತ್ಕರಿಸಿದರು.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಯು.ಬಿ. ವೆಂಕಟೇಶ, ಎಚ್ಕೆಇ ಸೊಸೈಟಿ ಕಾರ್ಯದರ್ಶಿ ಡಾ. ಜಗನ್ನಾಥ ಬಿಜಾಪುರೆ, ಆಡಳಿತ ಮಂಡಳಿ ಸದಸ್ಯರಾದ ಮಹಾದೇವಪ್ಪ ರಾಂಪುರೆ, ಡಾ. ಎಸ್.ಬಿ. ಕಾಮರಡ್ಡಿ, ಅರುಣಕುಮಾರ ಪಾಟೀಲ, ರಜನೀಶ ವಾಲಿ, ವೀರೇಂದ್ರ ಪಾಟೀಲ, ಎಂಆರ್ಎಂಸಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ. ಪಾಟೀಲ ಇತರರು ವೇದಿಕೆಯಲ್ಲಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ವೈದ್ಯಕೀಯ ಸೀಟುಗಳು ದೊರೆಯುತ್ತಿವೆ. ಪ್ರತಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆಯುವುದು ನಮ್ಮ ಸರ್ಕಾರದ ಗುರಿಡಾ. ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.