ADVERTISEMENT

ಚಿಂಚೋಳಿ: ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲ

ಪಂಚಾಯತ್ ರಾಜ್ ಸಚಿವರ ತವರು ಜಿಲ್ಲೆಯಲ್ಲಿ ಸೋರುತ್ತಿರುವ ಕಟ್ಟಡ 

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 6:44 IST
Last Updated 2 ಆಗಸ್ಟ್ 2024, 6:44 IST
ಚಿಂಚೋಳಿಯ ಚಂದಾಪುರದಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ ಮಳೆ ನೀರಿನಲ್ಲಿ ನೆನೆದು ಶಿಥಿಲಗೊಂಡಿರುವುದು
ಚಿಂಚೋಳಿಯ ಚಂದಾಪುರದಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡ ಮಳೆ ನೀರಿನಲ್ಲಿ ನೆನೆದು ಶಿಥಿಲಗೊಂಡಿರುವುದು   

ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದಲ್ಲಿರುವ ತಾಲ್ಲೂಕು ಪಂಚಾಯಿತಿ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಸಿಬ್ಬಂದಿ ಆತಂಕದಲ್ಲಿಯೇ ಕೆಲಸ ನಿರ್ವಹಿಸುವಂತಾಗಿದೆ.

ಹೊರಗಡೆಯಿಂದ ಕಟ್ಟಡ ನೋಡಿದರೆ ಒಳಗಡೆ ಹೋಗುವುದಕ್ಕೂ ಹೆದರಿಕೆ ಬರುವಂತಾಗಿದೆ. ಕಟ್ಟಡದ ಒಳಗಡೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೊಠಡಿ ಹೊರತುಪಡಿಸಿದರೆ ಉಳಿದೆಲ್ಲ ಕೊಠಡಿಗಳು ಸೋರುತ್ತಿವೆ.

ಕಾರಿಡಾರ್, ಸಭಾಂಗಣ, ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಗಳು, ಆಡಳಿತ ಶಾಖೆ, ಸ್ವಸಹಾಯ ಸಂಘಗಳಿಗೆ ನೆರವು ನೀಡುವ ಎನ್‌ಆರ್‌ಎಲ್‌ಎಂ ಶಾಖೆ, ಉದ್ಯೋಗ ಖಾತ್ರಿ ಸಹಾಯಕ ನಿರ್ದೆಶಕರ ಚೇಂಬರ್, ಹಳೆ ಕಂಪ್ಯೂಟರ್ ಶಾಖೆ ಕೊಠಡಿಗಳು ಸೋರುತ್ತಿವೆ.

ADVERTISEMENT

ಚಾವಣಿ ಪ್ಲಾಸ್ಟರ್ ಕಿತ್ತು ಬೀಳುತ್ತಿದ್ದು, ಗೋಡೆಗಳು ನೆನೆದು ನಿಂತಿವೆ. ಇದರಿಂದ ವಿದ್ಯುತ್ ಪ್ರವಹಿಸುವ ಆತಂಕವೂ ಸಿಬ್ಬಂದಿಯನ್ನು ಕಾಡುತ್ತಿದೆ. ಮಳೆ ನೀರು ಸೋರುತ್ತಿರುವುದರಿಂದ ನೆಲಹಾಸು ಟೈಲ್ಸ್ ಆಗಿರುವುದರಿಂದ ಕಚೇರಿಯಲ್ಲಿ ಓಡಾಡುವಾಗ ಕಾಲು ಜಾರುತ್ತಿವೆ. ಇಂತಹ ಕಟ್ಟಡದಲ್ಲಿ ಕಚೇರಿ ನಡೆಯುತ್ತಿದೆ.

‘ಕಟ್ಟಡದ ಹಿಂದೆ ಸಾಮರ್ಥ್ಯಸೌಧವಿದ್ದು, ಅಲ್ಲಿಗೆ ಸ್ಥಳಾಂತರಗೊಳಿಸಿದರೆ ಸಿಬ್ಬಂದಿ ನಿರ್ಭೀತಿಯಿಂದ ಕೆಲಸ ಮಾಡಬಹುದಾಗಿದೆ. ಆದರೆ ಅಲ್ಲಿ ಚೇಂಬರ್‌ಗಳಿಲ್ಲ. ಕೇವಲ ದೊಡ್ಡ ಹಾಲ್‌ಗಳಿವೆ. ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಅತಿ ಜರೂರಾಗಿದೆ’ ಎನ್ನುತ್ತಾರೆ ಜೆಡಿಎಸ್ ಮುಖಂಡ ಹಣಮಂತ ಪೂಜಾರಿ.

ಇಡೀ ಕಟ್ಟಡ ಮಳೆಗಾಲದಲ್ಲಿ ಅಪಾಯ ಆಹ್ವಾನಿಸುವಂತಿದ್ದು, ಸಂಪೂರ್ಣ ಶಿಥಿಲಗೊಂಡಿದೆ. ಚಿಂಚೋಳಿ ತಾಲ್ಲೂಕು ಕರ್ನಾಟಕಕ್ಕೆ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಸಹಿತ ಘಟಾನುಘಟಿ ನಾಯಕರನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಜತೆಗೆ ಪಂಚಾಯತ್‌  ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರ ಸ್ವಂತ ಜಿಲ್ಲೆಯಲ್ಲಿ ತಾ.ಪಂ. ಕಚೇರಿ ಕಟ್ಟಡ ದಯನೀಯ ಸ್ಥಿತಿಯಲ್ಲಿದೆ. 2 ವರ್ಷಗಳ ಹಿಂದೆಯೇ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡಕ್ಕಾಗಿ ಅನುದಾನ ಮಂಜೂರಿಗೆ ಸಲ್ಲಿಸಿದ ಪ್ರಸ್ತಾವ ಧೂಳು ಹಿಡಿದಿದೆ.

ತಾ.ಪಂ. ಕಚೇರಿ ಕಟ್ಟಡ ಸುಮಾರು ಐದು ದಶಕಗಳ ಹಿಂದೆ ನಿರ್ಮಿಸಿದ್ದು, ಈ ಕಟ್ಟಡ ಹಿಂದೆ ತಾಲ್ಲೂಕು ಡೆವೆಲಪಮೆಂಟ್ ಬೋರ್ಡ್‌ ಕಚೇರಿಯಾಗಿತ್ತು. ನಂತರ ತಾ.ಪಂ. ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ತಾ.ಪಂ.ಗೆ ಈಗ ಚುನಾಯಿತ ಪ್ರತಿನಿಧಿಗಳು ಇಲ್ಲ. ತಾ.ಪಂಗೆ ಪ್ರತಿವರ್ಷ ಬರುವ ₹2 ಕೋಟಿ ಅಭಿವೃದ್ಧಿ ಅನುದಾನದಲ್ಲಿಯೇ ಸ್ವಂತ ಕಟ್ಟಡ ನಿರ್ಮಿಸಬೇಕು.
–ಗೌರಿಶಂಕರ ಉಪ್ಪಿನ, ಗ್ರಾ.ಪಂ. ಸದಸ್ಯ ಗಡಿಲಿಂಗದಳ್ಳ
ತಾ.ಪಂ ಕಟ್ಟಡ ನಿರ್ಮಿಸಿ ಹಲವು ದಶಕಗಳು ಕಳೆದಿವೆ. ಈಗಿರುವ ಕಟ್ಟಡ ನೆಲಸಮಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
–ಶಂಕರ ರಾಠೋಡ, ಇಒ ತಾ.ಪಂ. ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.