ಕಲಬುರಗಿ: ಸೌರಮಂಡಲದ ಅಧ್ಯಯನಕ್ಕೆ ಮಕ್ಕಳಿಗೆ ನೆರವಾಗಲು ಜಿಲ್ಲಾ ಪಂಚಾಯಿತಿಯ ಅನುದಾನದಿಂದ ತಲಾ ₹1 ಲಕ್ಷ ವೆಚ್ಚದಲ್ಲಿ ಖರೀದಿಸಲಾದ 4 ಟೆಲಿಸ್ಕೋಪ್ಗಳನ್ನು ಅತಿ ಹೆಚ್ಚು ದಾಖಲಾತಿ ಹೊಂದಿರುವ ಜಿಲ್ಲೆಯ ನಾಲ್ಕು ಸರ್ಕಾರಿ ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ವಿತರಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ನೆಲ ಮಹಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಟೆಲಿಸ್ಕೋಪ್ಗಳನ್ನು ಶಾಲಾ ಮಕ್ಕಳ ಸಮ್ಮುಖದಲ್ಲಿ ಕಲಬುರಗಿ ದಕ್ಷಿಣ ವಲಯ ವ್ಯಾಪ್ತಿಯ ಶತಮಾನೋತ್ಸವ ಕುವೆಂಪು ಮಾದರಿ ಸರ್ಕಾರಿ ಪ್ರೌಢ ಶಾಲೆ ನಂದೂರ(ಕೆ), ಕಲಬುರಗಿ ಉತ್ತರ ವಲಯ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆ ಮಹಾತ್ಮ ಬಸವೇಶ್ವರ ನಗರ ಕಲಬುರಗಿ, ಚಿಂಚೋಳಿ ಶೈಕ್ಷಣಿಕ ವಲಯ ವ್ಯಾಪ್ತಿಯ ಪೋಲಕಪಳ್ಳಿ ಆದರ್ಶ ವಿದ್ಯಾಲಯ ಹಾಗೂ ಚಿತ್ತಾಪುರ ಶೈಕ್ಷಣಿಕ ವಲಯದ ಗುಂಡಗುರ್ತಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಲಾಯಿತು.
ಶಾಲೆಗಳು ಟೆಲಿಸ್ಕೋಪ್ ಅನ್ನು ಕಲಿಕೋಪಕರಣವಾಗಿ ಬಳಸಿಕೊಳ್ಳಬಹುದಾಗಿದೆ. ವಿಶೇಷ ತರಗತಿಗಳು, ಕಾರ್ಯಾಗಾರಗಳು ಮತ್ತು ಗ್ರಹಣ ದಿನಗಳಂದು ಸುತ್ತಲಿನ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಆಕಾಶಕಾಯಗಳನ್ನು ಈ ದೂರದರ್ಶಕ ಬಳಸಿ ನೋಡಬಹುದಾಗಿದೆ. ಇದರಿಂದ ಮಕ್ಕಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲು ನೆರವಾಗಲಿದೆ.
ಟ್ರೈಪಾಡ್ ಹೊಂದಿರುವ ಈ ದೂರದರ್ಶಕಗಳನ್ನು ಶಾಲೆ ಆವರಣದಲ್ಲಿ ನಿಲ್ಲಿಸಿ ಅದರ ಮೂಲಕ ಗ್ರಹಗಳು, ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಬಹುದಾಗಿದೆ.
ಈ ವೇಳೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಅಫಜಲಪುರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರಸಿಂಗ್ ಮೀನಾ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.