ಕಲಬುರಗಿ: ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕದಿಯಲು ಹೋದಾಗ ಅಪರಿಚಿತರು ಹಲ್ಲೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ ಕಳ್ಳನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಬಾಪುನಗರದ ಮಾಂಗರವಾಡಿ ನಿವಾಸಿ ರಾಮ ಉಪಾಧ್ಯ (30) ಹಲ್ಲೆಗೆ ಒಳಗಾದವನು. ಹಲ್ಲೆ ಮಾಡಿದ ನಾಲ್ವರು ಅಪರಿಚಿತರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಹಿನ್ನೆಲೆಯುಳ್ಳ (ಎಂಒಬಿ) ರಾಮ, ಕೂಲಿ ಕೆಲಸ ಮತ್ತು ಸಣ್ಣಪುಟ್ಟ ಮೊಬೈಲ್ ಕಳವು ಮಾಡುತ್ತಿದ್ದ. ರಾಮ ಕಳ್ಳತನ ಕೃತ್ಯ ಎಸಗಲು ಮಾರ್ಚ್ 31ರ ತಡರಾತ್ರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾನೆ. ಆಸ್ಪತ್ರೆಯ ಹೆರಿಗೆ ವಾರ್ಡ್ನಲ್ಲಿ ಹೋಗುತ್ತಿದ್ದಂತೆ, ಆವರಣದಲ್ಲಿದ್ದ ಅಪರಿಚಿತರು ಕಳ್ಳ ಎಂಬುದನ್ನು ಗುರುತು ಹಿಡಿದರು. ಅವಾಚ್ಯ ಪದಗಳಿಂದ ಬೈದು, ರಾಮನ ಹಲ್ಲೆ ಸಹ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿದ್ದ ರಾಮನನ್ನು ವಶಕ್ಕೆ ಪಡೆದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಠಾಣೆಗೆ ಕರೆ ತರಲಾಗಿದೆ. ಆರೋಪಿ ನೀಡಿದ ದೂರಿನ ಅನ್ವಯ, ಅಪರಿಚಿತರ ವಿರುದ್ಧ ಐಪಿಸಿ ಕಲಂ 323, 324, 504 ಜತೆಗೆ 34 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.