ಕಲಬುರಗಿ: ಹುಬ್ಬಳ್ಳಿಯಲ್ಲಿ ಶನಿವಾರ ನಿಧನರಾದ ಹಿರಿಯ ಪತ್ರಕರ್ತ ಮತ್ತಿಹಳ್ಳಿ ಮದನಮೋಹನ ಅವರಿಗೆ ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತ ಶ್ರೀಕಾಂತಾಚಾರಿ ಮಣ್ಣೂರ್ ಮಾತನಾಡಿ, ‘ಮದನಮೋಹನ ಅವರ ನಿಧನದಿಂದ ಪತ್ರಿಕೋದ್ಯಮ ಜಗತ್ತು ಒಬ್ಬ ಸ್ಪಷ್ಟ ಮತ್ತು ಪ್ರಾಮಾಣಿಕ ಪತ್ರಕರ್ತನನ್ನು ಕಳೆದುಕೊಂಡಿದೆ. ತಾವು ಬೆಳೆಯುವುದಲ್ಲದೇ ಹಲವು ಪತ್ರಕರ್ತರನ್ನು ಬೆಳೆಸಿದರು’ ಎಂದು ಹೇಳಿದರು.
ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಮಾತನಾಡಿ, ‘1980ರ ದಶಕದಲ್ಲಿ ನನ್ನನ್ನು ಪತ್ರಕರ್ತನನ್ನಾಗಿ ಮಾಡುವಲ್ಲಿ ಮದನಮೋಹನ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಪತ್ರಿಕೋದ್ಯಮದ ಬಹುತೇಕ ಎಲ್ಲ ಅಂಶಗಳ ಬಗ್ಗೆ ಜ್ಞಾನ ಹೊಂದಿದ್ದರು’ ಎಂದರು.
ಮದನಮೋಹನ ಅವರ ನಿಕಟವರ್ತಿ ಎಸ್.ಎಸ್.ಹಿರೇಮಠ ಮಾತನಾಡಿ, ‘ಮದನಮೋಹನ ಅವರು ಪರಿಪೂರ್ಣ ಪತ್ರಕರ್ತರಾಗಿದ್ದರು’ ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಚೇರ್ಪರ್ಸನ್ ಸುನೀತಾ ಪಾಟೀಲ, ಪತ್ರಕರ್ತ ಪ್ರವೀಣ್ ಪಾರಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.