ಕಲಬುರಗಿ: ಬಿರುಗಾಳಿಗೆ ಮುರಿದು ಬಿದ್ದ ನಗರದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಭೇಟಿ ನೀಡಿ ಪರಿಶೀಲನೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಕರೆ ಮಾಡಿ ಗಮನಕ್ಕೆ ತಂದು ಕಳಪೆ ಕಾಮಗಾರಿ ತನಿಖೆ ಮಾಡಬೇಕು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೋರಿದರು.
ಘಟಕದ ಕಂಬಗಳನ್ನೆಲ್ಲ ಗಮನಿಸಿದ ಶಾಸಕರು ಗಾಳಿ ಒತ್ತಡ ಹುಟ್ಟಿದ್ದರೆ ಮೇಲಿನ ಪತ್ರಾಸ್ಗಳು ಹಾರಬೇಕಿತ್ತು. ಕಂಬಗಳೇ ಮುರಿದಿವೆ, ಕಾಮಗಾರಿಯೇ ಕಳಪೆಯಾಗಿರುವ ಶಂಕೆ ಇದೆ. ಇದರಿಂದ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗಿದೆ. ಈ ಘಟಕ ಪೂರ್ಣ ಪ್ರಮಾಣದ ಕೆಲಸ ಆರಂಭಕ್ಕೂ ಮುನ್ನವೇ ಕುಸಿದಿದೆ. ಮತ್ತೆ ತ್ಯಾಜ್ಯ ವಿಲೇವಾರಿಗೆ ಅಡಚಣೆ ಬರಲಿದೆ. ಈಗಾಗಲೇ ಇಲ್ಲಿ ಕಸ ಸಂಗ್ರಹದಿಂದ ಅಂತರ್ಜಲ ಮಲೀನವಾಗಿದೆ, ತಕ್ಷಣ ಘಟಕ ದುರಸ್ತಿಯಾಗಬೇಕು’ ಎಂದು ಹೇಳಿದರು.
ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ್ ಮಾತನಾಡಿ, ‘ಬಿರುಗಾಳಿ ಜೋರಾಗಿ ಬೀಸಿದಾಗ ಮುಂದೆ ಕಸದ ಗುಡ್ಡೆ ಇದ್ದ ಕಾರಣ ಅಲ್ಲಿಂದ ಸಾಗದೆ ಹಿಂದೆ ಒತ್ತಡವಾಗಿದೆ. ಇದರಿಂದಲೇ ತ್ಯಾಜ್ಯ ಘಟಕದ 16 ಕಂಬಗಳು ಮುರಿದು ಘಟಕ ಕುಸಿದಿದೆ’ ಎಂದು ಮಾಹಿತಿ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ನಾಗೇಂದ್ರ ಶೇರಿಕಾರ್, ಉದನೂರು ಗ್ರಾಮದ ಮುಖಂಡರು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.