ಕಾಳಗಿ: ತಾಲ್ಲೂಕಿನ ಒಂದೆರಡು ಕಡೆ ಸಣ್ಣಪುಟ್ಟ ಗದ್ದಲ ಹೊರತುಪಡಿಸಿ ಎಲ್ಲ 127 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಮೂರು ವಿಧಾನಸಭಾ ಕ್ಷೇತ್ರ ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದ ತಾಲ್ಲೂಕಿನಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರದ 92, ಚಿತ್ತಾಪುರ ವಿಧಾನಸಭಾ ಕ್ಷೇತ್ರದ 27 ಮತ್ತು ಸೇಡಂ ವಿಧಾನಸಭಾ ಕ್ಷೇತ್ರದ 8 ಮತಗಟ್ಟೆಗಳಲ್ಲಿ ಮತದಾರರು ಹಕ್ಕು ಚಲಾಯಿಸಿದರು.
ಚಿಂಚೋಳಿ ವಿಧಾನಸಭಾ ಕ್ಷೇತ್ರದ 92 ಮತಗಟ್ಟೆಗಳು ಬೀದರ್ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿದರೆ, ಚಿತ್ತಾಪುರ ಮತ್ತು ಸೇಡಂ ವಿಧಾನಸಭಾ ಕ್ಷೇತ್ರದ 35 ಮತಗಟ್ಟೆಗಳು ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಸೇರಿವೆ.
ವೃದ್ಧರನ್ನು ಕರೆತಂದು ಮತದಾನ ಮಾಡಿಸುವ ಸಂಬಂಧ ಹದನೂರ ಗ್ರಾಮದಲ್ಲಿ ನಡೆದ ಎರಡು ಗುಂಪುಗಳ ನಡುವಿನ ಜಗಳ ಪೊಲೀಸರ ಮಧ್ಯಸ್ಥಿಕೆಯಿಂದ ತಿಳಿಗೊಂಡಿತು. ಬಳಿಕ ಸಂಸದ, ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಜಿ.ಪಂ ಮಾಜಿ ಸದಸ್ಯ ಅರವಿಂದ ಚವಾಣ್ ಸ್ಥಳಕ್ಕೆ ಭೇಟಿ ನೀಡಿ ಎಲ್ಲರನ್ನು ಸಮಾಧಾನ ಪಡಿಸಿದರು.
ಕಂದಗೂಳ ಗ್ರಾಮದಲ್ಲಿಯೂ ವಾಗ್ವಾದ ನಡೆದು ಬಳಿಕ ಶಮನಗೊಂಡಿತು.
ತಹಶೀಲ್ದಾರ್ ಘಮಾವತಿ ರಾಠೋಡ, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಬಸವಣಪ್ಪ ಹೂಗಾರ ಸೇರಿದಂತೆ ವಿವಿಧ ಸ್ತರದ ಚುನಾವಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಎಲ್ಲೆಡೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.