ಚಿಂಚೋಳಿ: ‘ಮಳೆಗಾಲ ಪ್ರಾರಂಭವಾಗಿದ್ದು ಜಲ ಮೂಲಗಳ ಸ್ವಚ್ಛತೆ ಕಾಪಾಡುವುದು ಅವಶ್ಯ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಸಾಧ್ಯವಾಗುತ್ತದೆ’ ಎಂದು ಟಿಎಚ್ಒ ಡಾ. ಮಹಮದ್ ಗಫಾರ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ರಾ.ಪಂ. ಕರ ವಸೂಲಿಗಾರರು, ಪಂಪ್ ಆಪರೇಟರ್ಸ್ ಮತ್ತು ಡಾಟಾ ಎಂಟ್ರಿ ಆಪರೇಟರ್ಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿಯಲ್ಲಿ ಮಾತನಾಡಿದರು.
‘ಕಲುಷಿತ ನೀರು ಸೇವಿಸಿದರೆ, ಸ್ವಚ್ಛತೆಯ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಎದುರಾದರೆ ಜನರು ತೊಂದರೆಗೆ ಸಿಲುಕುತ್ತಾರೆ. ಆದರೆ ಮುಂಜಾಗ್ರತೆವಹಿಸಿದರೆ ತೊಂದರೆ, ಜೀವಹಾನಿಯಂತಹ ಘಟನೆ ತಡೆಯಲು ಸಾಧ್ಯ. ಕುಡಿಯಲು ಪೂರೈಸುವ ನೀರನ್ನು ಕಡ್ಡಾಯವಾಗಿ ಪರೀಕ್ಷಿಸಬೇಕು. ಯೋಗ್ಯವಾದ ನೀರು ಮಾತ್ರ ಸರಬರಾಜು ಮಾಡಬೇಕು. ಯೋಗ್ಯವಲ್ಲದ ನೀರಿನ ಜಲಮೂಲಗಳಲ್ಲಿ ಫಲಕ ಹಾಕಿ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.
ತಾ.ಪಂ ಇಒ ಶಂಕರ ರಾಠೋಡ್ ಮಾತನಾಡಿ, ‘ಈಗ ನೀಡಿರುವ ಕಿಟ್ಗಳನ್ನು ಬಳಕೆ ಮಾಡಬೇಕು. ಈ ಮೂಲಕ ಗ್ರಾ.ಪಂ ವ್ಯಾಪ್ತಿಯ ಹಳ್ಳಿ ತಾಂಡಾಗಳ ಜನರ ಆರೋಗ್ಯ ಕಾಪಾಡುವ ಹೊಣೆ ನಿಮ್ಮದು’ ಎಂದರು.
ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಶಾಖಾಧಿಕಾರಿ ಯುವರಾಜ ರಾಠೋಡ್, ತಾ.ಪಂ. ಸಹಾಯಕ ನಿರ್ದೆಶಕ ನಾಗೇಂದ್ರ ಬೆಡಕಪಳ್ಳಿ ಮಾತನಾಡಿದರು.
ಪ್ರಯೋಗಾಲಯ ತಂತ್ರಜ್ಞರಾದ ಮಂಜುನಾಥ ಜಮಾದಾರ, ಜಲಜೀವನ ಮಿಷನ್ ಯೋಜನೆಯ ಈಎಸ್ಆರ್ಎ ಹಸ್ತಕಲಾ ಸಂಸ್ಥೆಯ ಸಂತೋಷ ಮೂಲಗೆ, ರಾಜಶೇಖರ ಸನಗಂದಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.