ನರೇಗಾ: ಕಾಮಗಾರಿ ವೇಳೆಯೇ ಕಾರ್ಮಿಕ ಸಾವು
ಪ್ರಜಾವಾಣಿ ವಾರ್ತೆ Published 8 ಮೇ 2022, 14:38 IST Last Updated 8 ಮೇ 2022, 14:38 IST ಸೂರ್ಯಕಾಂತ ಪಂಚಾಳ
ಆಳಂದ (ಕಲಬುರಗಿ): ತಾಲ್ಲೂಕಿನ ರುದ್ರವಾಡಿ ಗ್ರಾಮ ಪಂಚಾಯಿತಿಯಿಂದ ಕೈಗೊಂಡ ನರೇಗಾ ಕಾಮಗಾರಿ ವೇಳೆ ಕಾರ್ಮಿಕ ಶನಿವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಉದ್ಯೋಗ ಖಾತ್ರಿಯ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸೂರ್ಯಕಾಂತ ಕಲ್ಯಾಣಿ ಪಂಚಾಳ (42) ಏಕಾಏಕಿ ಪ್ರಜ್ಞೆ ತಪ್ಪಿ ಕುಸಿದು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಹೃದಯಾಘಾತದಿಂದ ಕಾರ್ಮಿಕ ಮೃತಪಟ್ಟಿದ್ದಾರೆ ದೃಢಪಡಿಸಿದರು.
ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಂಜಯ ರೆಡ್ಡಿ, ಅಧಿಕಾರಿಗಳಾದ ಪ್ರವೀಣ, ಸಂತೋಷ ಹತ್ತರಕಿ ಭೇಟಿ ನೀಡಿ, ಪರಿಶೀಲಿಸಿದರು.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಿಡಿಒ ಸುನೀಲಕುಮಾರ ರಟಕಲ, ಪ್ರಭಾಕರ ಪುಲಾರೆ, ಸುನೀಲಕುಮಾರ, ಸುಧಾಕರ ಜಮದಾರ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಶೀಲಕುಮಾರ್ ಅಂಬುರೆ, ‘ಬಿಸಿಲಿನಿಂದ ಮೃತಪಟ್ಟಿದ್ದರೆ ಸ್ಥಳದಲ್ಲಿರುವ ನಮ್ಮ ವೈದ್ಯಕೀಯ ಸಿಬ್ಬಂದಿ ಮಾಹಿತಿ ನೀಡುತ್ತಿದ್ದರು. ಸಹಜ ಸಾವು ಆಗಿದ್ದರಿಂದ ಮಾಹಿತಿ ನೀಡಿರಲಿಕ್ಕಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ’ ಎಂದರು.