ಕಲಬುರಗಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಚಂದ್ರಕಾಂತ ಪಾಟೀಲ ಪಬ್ಲಿಕ್ ಸ್ಕೂಲ್ನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅಳಿವಿನಂಚಿನಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ನಗರದಲ್ಲಿ ರ್ಯಾಲಿ ಮತ್ತು ವಾಕ್ಥಾನ್ ನಡೆಸಿದರು.
ಎಸ್ಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಜಿ. ಪಾಟೀಲ ಮಾತನಾಡಿ, ಕರ್ನಾಟಕದ ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಮಹತ್ವವನ್ನು ತಿಳಿಸಿದರು. ಶಾಲೆಯ ಪ್ರಾಂಶುಪಾಲ ಕಿರಣಕುಮಾರ ಕುಲಕರ್ಣಿ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರತಿಯೊಂದು ಜಾತಿಯ ಸಸ್ಯ ಮತ್ತು ಪ್ರಾಣಿಗಳ ಪಾತ್ರದ ಕುರಿತು ವಿವರಿಸಿದರು.
ಶಾಲಾ ಆವರಣದಲ್ಲಿ ಆರಂಭವಾದ ರ್ಯಾಲಿ ಖರ್ಗೆ ವೃತ್ತದವರೆಗೆ ಸಾಗಿತು. ಭೂಮಿ ಮೇಲಿನ ಮನುಷ್ಯನ ಆಕ್ರಮಣ ಮತ್ತು ಬೇಟೆಯಿಂದಾಗಿ ಸಸ್ಯ ಸಂಪತ್ತು ಮತ್ತು ಪ್ರಾಣಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು. ಜೊತೆಗೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿದರು.
ವಿವಿಧ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಕೇಂದ್ರಿತವಾಗಿದ್ದ ರ್ಯಾಲಿಯು ಸಂರಕ್ಷಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿತು. ರಾಮಮಂದಿರದಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಧನ್ವಂತ್ರಿ ಆಸ್ಪತ್ರೆ ಎದುರು ತರಕಾರಿ ವ್ಯಾಪಾರಿಗಳಿಗೆ ತಿಂಡಿ ವಿತರಿಸುವ ಮೂಲಕ ರ್ಯಾಲಿ ಮುಕ್ತಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.